ಫೇಸ್ಬುಕ್ ಪೇಜ್ ’ಜಾಸ್ತಿ ಪ್ರೀತಿ’ ಸಿನಿಮಾಗೆ ಸ್ಪೂರ್ತಿ!

’ಜಾಸ್ತಿ ಪ್ರೀತಿ’ ಚಿತ್ರದ ಟ್ರೇಲರ್ ಹಾಗೂ ಹಾಡು ಬಿಡುಗಡೆ
’ಪೂರ್ಣ ಶ್ರೀ ಎಂಟರ್ಪ್ರೈಸಸ್’ ಬ್ಯಾನರಿನಲ್ಲಿ ಸಿದ್ದಗೊಂಡಿರುವ ’ಜಾಸ್ತಿ ಪ್ರೀತಿ’ ಚಿತ್ರದ ಟ್ರೇಲರ್ ಹಾಗೂ ಹಾಡು ಬಿಡುಗಡೆ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ʼಕರ್ನಾಟಕ ಚಲನಚಿತ್ರ ಕಲಾವಿದರ ಸಂಘʼ ದ ಆಡಿಟೋರಿಯಂನಲ್ಲಿ ಅದ್ದೂರಿಯಾಗಿ ನಡೆಯಿತು. ’ಜಾಸ್ತಿ ಪ್ರೀತಿ’ ಚಿತ್ರದ ಟೈಟಲ್ಗೆ ’ಮಿಡಿದ ಹೃದಯಗಳ ಮೌನರಾಗ’ ಎಂಬ ಅಡಿಬರಹವಿದೆ. ಹಲವು ದಶಕಗಳಿಂದ ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಗುರುತಿಸಿಕೊಂಡಿರುವ ಶಿವರಾಂ ಕೊಡತಿ ಮೊದಲ ಬಾರಿಗೆ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುವ ಮೂಲಕ ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಎಸ್.ಆರ್.ಕೆ ಕೃಷ್ಣಪ್ಪ ಸರ್ಜಾಪುರ ಈ ಚಿತ್ರದ ಮೂಲಕ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಅರುಣ್ ಮಾನವ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ.
ಸಿನಿಮಾ ಹುಟ್ಟಲು ಫೇಸ್ಬುಕ್ ಪೇಜ್ ಕಾರಣ!
’ಜಾಸ್ತಿ ಪ್ರೀತಿ’ ಚಿತ್ರದ ಟ್ರೇಲರ್ ಹಾಗೂ ಹಾಡು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ಅರುಣ್ ಮಾನವ್, ʼಪ್ರೀತಿಯ ಅವ್ಯಕ್ತಭಾವ ʼಜಾಸ್ತಿಪ್ರೀತಿʼಯಾಗಿದೆ. ಸಿನಿಮಾ ಹುಟ್ಟಲು ಫೇಸ್ಬುಕ್ ಪೇಜ್ ಕಾರಣವಾಗಿದೆ. ಹೀಗೆ ಒಮ್ಮೆ ಎಫ್ಬಿ ನೋಡುವಾಗ ಒಂದು ಹುಡುಗಿಯ ಫೋಟೋ ನೋಡಿ ಕರುಳು ಚುರ್ ಅನಿಸಿತು. ಅದರ ಏಳೆಯನ್ನು ತೆಗೆದುಕೊಂಡು ಕಾಲ್ಪನಿಕ ಚಿತ್ರಕಥೆಯನ್ನು ಬರೆಯಲಾಯಿತು. ಎಲ್ಲಿಯೂ ನೋಡದೆ ಇರತಕ್ಕಂತ ಪ್ರೀತಿಯನ್ನು ಇದರಲ್ಲಿ ನೋಡಬಹುದು. ಹಾಗಂತ ʼಜಾಸ್ತಿಪ್ರೀತಿʼಗೆ ಯಾವುದೇ ವ್ಯಕ್ತಿಗೆ ಸಂಬಂದಪಟ್ಟಿರುವುದಿಲ್ಲ. ಇಲ್ಲಿಯವರೆಗೆ ಬಂದಿರುವ ಯಾವುದೇ ಕಥೆಗಳು ಈ ಸಿನಿಮಾದಲ್ಲಿ ಇರುವುದಿಲ್ಲ. ಯಾವ ದೃಶ್ಯವು ಹಿಂದಿನ ಚಿತ್ರದಲ್ಲಿ ನೋಡಿದಂತೆ ಭಾಸವಾಗುವುದಿಲ್ಲ. ವಿಭಿನ್ನ ನಿರೂಪಣೆ ಹೊಂದಿದ್ದು, ಪ್ರಾರಂಭದಿಂದ ಕೊನೆತನಕ ಊಹಿಸಲು ಕಷ್ಟವಾಗುತ್ತದೆ. ಪ್ರೀತಿಯನ್ನು ತೋರ್ಪಡಿಸಲಿಕ್ಕೆ ಆಗುವುದಿಲ್ಲವೋ, ಆಗ ಸೋತು ಹೋಗುತ್ತಾನೆ. ಅದನ್ನು ಇಲ್ಲಿ ಕಾಣಬಹುದುʼ ಎಂದು ವಿವರಣೆ ನೀಡಿದರು.
ಸಾಹಿತಿ, ಕವಿ, ಚಿಂತಕ, ವಿಮರ್ಶಕ ಹಾಗೂ ಚಿತ್ರ ನಿರ್ದೇಶಕ ಎಲ್. ಎನ್. ಮುಕುಂದರಾಜ್ ’ಜಾಸ್ತಿ ಪ್ರೀತಿ’ ಚಿತ್ರದ ಟ್ರೇಲರ್ ಹಾಗೂ ಹಾಡು ಬಿಡುಗಡೆ ಸಮಾರಂಭ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇವರು ಹೇಳುವಂತೆ, ʼಕನ್ನಡ ಸಿನಿಮಾ ಬೇರೆ ಬೇರೆ ರೀತಿಯಲ್ಲಿ ಬೆಳೆದಿದೆ. ಅನೇಕ ಚಿತ್ರಗಳು ಜಗತ್ತಿನ ಸಿನಿಮಾಗಳ ಎದುರು ಸವಾಲು ಒಡ್ಡುವಂತ ಕೆಲಸ ಮಾಡುತ್ತಿದೆ. ಅದೇ ಸಾಲಿನಲ್ಲಿ ʼಜಾಸ್ತಿ ಪ್ರೀತಿʼ ಸೇರುತ್ತದೆ. ಸಿನಿಮಾ ಎಂಬುದು ಉದ್ಯಮವಾಗಿದೆ. ನೂರಾರು ಜನರ ಪ್ರತಿಭೆ ಮತ್ತು ಪರಿಶ್ರಮ ಒಳಗೊಂಡಿದೆ. ತಮಿಳು, ಮಲೆಯಾಳಂ ಚಿತ್ರಗಳಲ್ಲಿ ಅಲ್ಲಿನ ಪ್ರಸಿದ್ದ ಕವಿಗಳು ಸಾಹಿತ್ಯ ರಚಿಸುತ್ತಾರೆ. ನಮ್ಮಲ್ಲಿ ಕಡಿಮೆ ಇದ್ದಾರೆ. ಕುಮಾರವ್ಯಾಸ ಹೆಸರಿನಲ್ಲಿ ಚಿತ್ರಪ್ರಶಸ್ತಿ ನೀಡಬೇಕು. ಚಿತ್ರತಂಡಕ್ಕೆ ಒಳ್ಳೆಯದಾಗಲಿʼ ಎಂದು ಹಾರೈಸಿದರು.
ಇಂಟೆನ್ಸ್ ಲವ್ಸ್ಟೋರಿ!
ʼಇಂಟೆನ್ಸ್ ಲವ್ಸ್ಟೋರಿ ಏಳೆ ತುಂಬಾ ಚೆನ್ನಾಗಿ ಬಂದಿದೆ. ಸಿನಿಮಾಗೆ ಏನು ಕಮ್ಮಿ ಮಾಡಿಲ್ಲ. ಎಲ್ಲರೂ ಫ್ಯಾಶನ್ನಿಂದ ಮಾಡಿದ್ದಾರೆ. ಇಂದು ಚಿತ್ರಮಂದಿರಗಳಿಗೆ ಪ್ರೇಕ್ಷಕರ ಕೊರತೆ ಇದೆ. ಯಾರು ಸಿನಿಮಾ ನೋಡಲು ಬರುತ್ತಿಲ್ಲ. ಆದರೂ ನಿರ್ಮಾಪಕರು ಧೈರ್ಯ ಮಾಡಿ, ನಂಬಿಕೆಯಿಂದ ಹಣ ಹೂಡಿದ್ದಾರೆ. ಒಳ್ಳೆ ಅಂಶಗಳು ಇರುವುದರಿಂದ ಚಿತ್ರ ನೋಡಲು ಬರುತ್ತಾರೆಂಬ ವಿಶ್ವಾಸವಿದೆ. ನನ್ನ ಅಭಿನಯದ ಕೆಲವು ಚಿತ್ರಗಳು ಬಿಡುಗಡೆಯಾಗಬೇಕಿದೆ. ನನಗೂ ಒಂದೆ ಕಡೆ ಬ್ರೇಕ್ ಸಿಗಬೇಕಂಬ ಹಂಬಲವಿದೆ. ಇದರಿಂದ ಸಿಗಬಹುದು. ಅದಕ್ಕಾಗಿ ಕಾಯ್ತಾ ಇದ್ದೇನೆʼ ಎಂಬುದು ನಾಯಕ ಧರ್ಮಕೀರ್ತಿರಾಜ್ ನುಡಿಯಾಗಿತ್ತು.
ಬೃಹತ್ ಕಲಾವಿದರ ಸಮಾಗಮ…
ಅಂದಹಾಗೆ, ʼಜಾಸ್ತಿ ಪ್ರೀತಿʼ ಸಿನಿಮಾದಲ್ಲಿ ಕೃಷಿ ತಪಂಡ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮತ್ತೊಂದು ಜೋಡಿಗಳಾಗಿ ಮುರಳಿರಾಮ್-ಶೋಭರಾಣಿ ಅಭಿನಯಿಸಿದ್ದಾರೆ. ಇವರೊಂದಿಗೆ ಬ್ಯಾಂಕ್ ಜನಾರ್ಧನ್, ಸುಚೇಂದ್ರ ಪ್ರಸಾದ್, ಮೈಸೂರು ರಮಾನಂದ್, ಎಂ. ಎನ್. ಲಕ್ಷ್ಮೀದೇವಿ, ಮಧು ಮಂದಗೆರೆ ಮುಂತಾದವರು ನಟಿಸಿದ್ದಾರೆ. ವಿನೀತ್ ರಾಜ್ ಮೆನನ್ ಆರು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಸತೀಶ್. ಸಿ. ಎಸ್ – ಬಿ. ಆರ್. ಮಲ್ಲಿಕಾರ್ಜುನ್ ಛಾಯಾಗ್ರಹಣ ಹಾಗೂ ವೆಂಕಟೇಶ್ ಯುಡಿವಿ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಗೋವಿಂದ್. ವಿ. ಮಾಲೂರು ನೃತ್ಯ, ಕುಂಗು ಫೂ ಚಂದ್ರು ಸಾಹಸ ಸಂಯೋಜಿಸಿದ್ದಾರೆ.
ಶೀಘ್ರದಲ್ಲಿ ಚಿತ್ರ ತೆರೆಗೆ…
ʼಜೇಂಕಾರ್ ಮ್ಯೂಸಿಕ್ʼ ಸಂಸ್ಥೆಯು ಈ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ. ಬೆಂಗಳೂರು, ಬಂಗಾರಪೇಟೆ ಸುಂದರ ತಾಣಗಳಲ್ಲಿ ʼಜಾಸ್ತಿ ಪ್ರೀತಿʼ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. ಇದೇ ಜೂನ್ ವೇಳೆಗೆ ʼಜಾಸ್ತಿ ಪ್ರೀತಿʼ ಸಿನಿಮಾವಾನ್ನು ತೆರೆಗೆ ತರಲು ಯೋಜನೆ ರೂಪಿಸಿದೆ ಚಿತ್ರತಂಡ.