‘ಮೂರನೇ ಕೃಷ್ಣಪ್ಪ’ನಿಗೆ ಲೂಸ್ ಮಾದ ಯೋಗಿ ಸಾಥ್..!

ಸಿನಿಮಾದ ಟ್ರೇಲರ್ ಗೆ ಧ್ವನಿಯಾದ ಯೋಗಿ
‘ಮೂರನೇ ಕೃಷ್ಣಪ್ಪ’ ಸಿನಿಮಾದ ಮೂಲಕ ಸಂಪತ್ ಮೈತ್ರೇಯಾ ಹೀರೋ …
ತಮ್ಮ ಅಭಿನಯದ ಮೂಲಕವೇ ಕನ್ನಡ ಸಿನಿಪ್ರೇಕ್ಷಕರನ್ನು ಗಮನಸೆಳೆದ ಸಂಪತ್ ಮೈತ್ರೇಯಾ ʼಮೂರನೇ ಕೃಷ್ಣಪ್ಪʼ ಸಿನಿಮಾ ಮೂಲಕ ನಾಯಕರಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಈಗಾಗಲೇ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಟ್ರೇಲರ್ ಬಿಡುಗಡೆ ತಯಾರಿ ನಡೆದಿದೆ. ಇತ್ತೀಚೆಗೆ ʼಮೂರನೇ ಕೃಷ್ಣಪ್ಪʼ ಸಿನಿಮಾದ ಮೊದಲ ನೋಟ ಹೊರಬಿದ್ದಿದ್ದು, ಲೂಸ್ ಮಾದ ಯೋಗಿ ಈ ಸಿನಿಮಾದ ಟ್ರೇಲರ್ ಗೆ ಧ್ವನಿಯಾಗಿದ್ದಾರೆ. ಈ ಮೂಲಕ ನವೀನ್ ರೆಡ್ಡಿ ಹೊಸ ಕನಸಿಗೆ ʼಸಿದ್ಲಿಂಗುʼ ಸಾಥ್ ಕೊಟ್ಟಿದ್ದಾರೆ.
ನಿರ್ದೇಶಕ ನವೀನ್ ರೆಡ್ಡಿ ಹೊಸ ಪ್ರಯತ್ನ
ಈ ಹಿಂದೆ ಕನ್ನಡದಲ್ಲಿ ʼಅಕಿರʼ ಹಾಗೂ ʼರಿಲ್ಯಾಕ್ಸ್ ಸತ್ಯʼ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ನವೀನ್ ರೆಡ್ಡಿ ಈಗ ‘ಮೂರನೇ ಕೃಷ್ಣಪ್ಪ’ ಸಿನಿಮಾವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸ ಮಗಿಸಿ ಪ್ರಚಾರ ಅಖಾಡಕ್ಕೆ ಎಂಟ್ರಿ ಕೊಟ್ಟಿದೆ. ʼರೆಡ್ ಡ್ರಾಗ್ಯನ್ ಫಿಲಂಸ್ʼ ಪ್ರೊಡಕ್ಷನ್ ಹೌಸ್ ನಡಿ ʼಮೂರನೇ ಕೃಷ್ಣಪ್ಪʼ ಚಿತ್ರ ಮೂಡಿ ಬರ್ತಿದೆ. ಈ ಹಿಂದೆ ʼರಿಲ್ಯಾಕ್ಸ್ ಸತ್ಯʼ ಚಿತ್ರವನ್ನು ಇದೇ ಪ್ರೊಡಕ್ಷನ್ ನಡಿ ಮೋಹನ್ ರೆಡ್ಡಿ ಜಿ, ರವಿಶಂಕರ್ ನಿರ್ಮಿಸಿದ್ದರು. ಇದೀಗ ಇದೇ ಪ್ರೊಡಕ್ಷನ್ ಹೌಸ್ ನಡಿ ಇವರಿಬ್ಬರು ʼಮೂರನೇ ಕೃಷ್ಣಪ್ಪʼ ಸಿನಿಮಾಗೆ ಹಣ ಹಾಕಿದ್ದಾರೆ.
ಆನೇಕಲ್ ಭಾಗದ ಭಾಷೆಯ ಸೊಬಗನ್ನು ಹೊತ್ತು ಬಂದಿರುವ ಈ ಚಿತ್ರದಲ್ಲಿ ಸಂಪತ್ ಮೈತ್ರೀಯಾ, ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಶ್ರೀಪ್ರಿಯಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ತುಕಾಲಿ ಸಂತೋಷ್, ಉಗ್ರಂ ಮಂಜು ತಾರಾಬಳಗದಲ್ಲಿದ್ದಾರೆ. ಮೂರನೇ ಕೃಷ್ಣಪ್ಪ ಸಿನಿಮಾಕ್ಕೆ ಆನಂದ್ ರಾಜವಿಕ್ರಮ್ ಸಂಗೀತ, ಶ್ರೀಕಾಂತ್ ಸಂಕಲನ, ಯೋಗಿ ಛಾಯಾಗ್ರಹಣವಿದೆ. ಚಿತ್ರತಂಡ ಯೋಚನೆಯಂತೆ ಎಲ್ಲವೂ ನಡೆದರೆ, ಇದೇ ವರ್ಷದ ಕೊನೆಯೊಳಗೆ ʼಮೂರನೇ ಕೃಷ್ಣಪ್ಪʼ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.