Quick ಸುದ್ದಿಗೆ ಒಂದು click

ʻಕನ್ನಡ ಚಲನಚಿತ್ರ ನಿರ್ಮಾಪಕರ ಸಂಘʼದ ನೂತನ ಕಟ್ಟಡ ಉದ್ಘಾಟನೆ

ಹೊಸ ಕಟ್ಟಡ ಉದ್ಘಾಟಿಸಿದ ಸಿ. ಎಂ ಸಿದ್ಧರಾಮಯ್ಯ

ಕೊನೆಗೂ ಈಡೇರಿದ ʻಕನ್ನಡ ಚಲನಚಿತ್ರ ನಿರ್ಮಾಪಕರ ಸಂಘʼದ ಬಹುದಿನಗಳ ಕನಸು 

ಬೆಂಗಳೂರು: ʻಕನ್ನಡ ಚಲನಚಿತ್ರ ನಿರ್ಮಾಪಕರ ಸಂಘʼಕ್ಕೆ ತನ್ನದೇ ಆದ ಸ್ವಂತ ಕಟ್ಟಡ ಇರಬೇಕು ಎಂಬ ನಿರ್ಮಾಪಕರ ಬಹುದಿನಗಳ ಕನಸು ಕೊನೆಗೂ ಈಡೇರಿದೆ. ಸುಮಾರು ಎರಡು ವರ್ಷಗಳಿಂದ ನಡೆಯುತ್ತಿದ್ದ, ʻಕನ್ನಡ ಚಲನಚಿತ್ರ ನಿರ್ಮಾಪಕರ ಸಂಘʼದ ನೂತನ ಕಟ್ಟದ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಬೆಂಗಳೂರಿನ ಹೃದಯಭಾಗವಾದ ಕುಮಾರ ಪಾರ್ಕ್‌ನ ಶಿವಾನಂದ ವೃತ್ತದ ಸಮೀಪದಲ್ಲಿ ನಿರ್ಮಾಣವಾಗಿರುವ ಈ ಕಟ್ಟಡವನ್ನು ಇದೇ (2024ರ ಜೂನ್‌ 30ರ) ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.

ಕನ್ನಡಕ್ಕೆ ಪ್ರತ್ಯೇಕ ಒಟಿಟಿ ತರಲು ಸರ್ಕಾರದ ಚಿಂತನೆ; ಸಿ. ಎಂ ಸಿದ್ಧರಾಮಯ್ಯ

ʻಕನ್ನಡ ಚಲನಚಿತ್ರ ನಿರ್ಮಾಪಕರ ಸಂಘʼದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, ʻನಿನ್ನೆ ದೆಹಲಿಗೆ ಹೋಗಿದ್ದೆ.. ಇವತ್ತು ಈ ಕಾರ್ಯಕ್ರಮಕ್ಕೆ ಬರುವ ಸಾಧ್ಯತೆ ಕಡಿಮೆ ಇತ್ತು. ಕನ್ನಡ ಚಿತ್ರರಂಗದ ಮೇಲೆ ನನಗೆ ಅಪಾರ ಗೌರವ ಇದೆ. ಮಿಸ್ ಮಾಡದೇ ಬರಬೇಕು ಎಂದು ಬಂದೆ. ಕನ್ನಡ ಚಿತ್ರರಂಗದ ಬೆಳವಣಿಗೆಗೆ ಎಷ್ಟು ಸಾಧ್ಯವೋ ಅಷ್ಟು ಸಹಕಾರ ನಮ್ಮಿಂದ ಇರುತ್ತದೆ. ಚಿತ್ರಮಂದಿರಗಳು, ಸಬ್ಸಿಡಿ ಬಗ್ಗೆ ಗಮನ ಹರಿಸಿ ಆರ್ಥಿಕ ನೆರವು ನೀಡುತ್ತೇವೆ.

ಜತೆಗೆ ಕನ್ನಡದಲ್ಲಿ ಒಟಿಟಿ ವೇದಿಕೆ ತರಲು, ಸಂಬಂಧ ಪಟ್ಟವರ ಜತೆ ಮಾತನಾಡುತ್ತೇವೆ. ಡಾ.ರಾಜ್‍ಕುಮಾರ್ ಕನಸಿನಂತೆ ಖಂಡಿತಾ ಒಂದು ಫಿಲ್ಮ್ ಸಿಟಿ ನಿರ್ಮಾಣ ಮಾಡುತ್ತೇವೆ. ಕನ್ನಡ ಭಾಷೆಯ ಚಿತ್ರಗಳಿಗೆ ಸರ್ಕಾರ ಸಹಾಯ ಮಾಡುತ್ತದೆ. ಫಿಲ್ಮಿ ಸಿಟಿಗೆ ಜಾಗ ಕೊಟ್ಟಿದ್ದೆ ನಮ್ಮ ಸರ್ಕಾರ. ನೂರು ಎಕೆರೆಗೂ ಹೆಚ್ಚು ಜಮೀನು ಕೊಟ್ಟಿದ್ದೇವೆʼ ಎಂದರು.
ಕಾರ್ಯಕ್ರಮದಲ್ಲಿ ಚಿತ್ರರಂಗ, ರಾಜಕೀಯ ರಂಗದ ಗಣ್ಯರು ಭಾಗಿ
ಈ ಕಾರ್ಯಕ್ರಮದಲ್ಲಿ ಜಗ್ಗೇಶ್‌, ಶಿವರಾಜ್‌ ಕುಮಾರ್‌, ʻಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿʼ ಅಧ್ಯಕ್ಷ ಎನ್‌. ಎಂ. ಸುರೇಶ್‌, ಮಾಜಿ ಅಧ್ಯಕ್ಷರಾದ ಭಾ. ಮ. ಹರೀಶ್‌, ʻಕರ್ನಾಟಕ ಚಲನಚಿತ್ರ ಅಕಾಡೆಮಿʼ ಅಧ್ಯಕ್ಷ ಸಾಧುಕೋಕಿಲ, ಸಚಿವ ಭೈರತಿ ಸುರೇಶ್‌ ಸೇರಿದಂತೆ  ಚಿತ್ರರಂಗ ಮತ್ತು ರಾಜಕೀಯ ರಂಗದ  ಅನೇಕ ಗಣ್ಯ ವ್ಯಕ್ತಿಗಳು ಭಾಗಿಯಾಗಿದ್ದರು.
ʻಹೊಂಬಾಳೆ ಫಿಲಂಸ್‍ʼ, ಆರ್‌.ಎಸ್‌. ಗೌಡ, ʻವಾಣಿಜ್ಯ ಮಂಡಳಿʼ ಸೇರಿದಂತೆ ಅನೇಕರು ಈ ನೂತನ ಕಟ್ಟಡ ನಿರ್ಮಾಣಕ್ಕೆ ಸಹಾಯ ಮಾಡಿದ್ದಾರೆ. ನಿರ್ಮಾಪಕ ರಮೇಶ್‌ ರೆಡ್ಡಿ ಕಟ್ಟಡ ನಿರ್ಮಾಣ ಜವಾಬ್ದಾರಿ ಹೊತ್ತು ನೆರವಾಗಿದ್ದಾರೆ.
ʻದಕ್ಷಿಣ ಭಾರತದಲ್ಲಿ ನಿರ್ಮಾಪಕರಿಗೆ ಎಂದೇ ಸ್ವಂತ ಕಟ್ಟಡ ಹೊಂದಿರುವುದು ಕರ್ನಾಟಕದಲ್ಲಿ ಮಾತ್ರʼ ಎಂದು ನಿರ್ಮಾಪಕರ ಸಂಘದ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ ಸಾ. ರಾ ಗೋವಿಂದು ತಿಳಿಸಿದರು. ʻನಿರ್ಮಾಪಕರ ಸಂಘʼದ ಕಾರ್ಯದರ್ಶಿ ಪ್ರವೀಣ್ ಕುಮಾರ್, ರಮೇಶ್‍ ಯಾದವ್‍, ಎಂ.ಜಿ. ರಾಮಮೂರ್ತಿ, ಆರ್.ಎಸ್. ಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು. ನಿರ್ಮಾಪಕರ ಸಂಘದ ಕಟ್ಟಡ ನಿರ್ಮಾಣದ ಸಮಿತಿಯ ಅಧ್ಯಕ್ಷರಾಗಿ ಸಾ. ರಾ ಗೋವಿಂದು ಕೆಲಸ ಮಾಡಿದ್ದಾರೆ. ಇನ್ನು ಶಿವಾನಂದ ಸರ್ಕಲ್ ಬಳಿಯಿರುವ ‘ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ’ದ ನೂತನ ಕಟ್ಟಡದಲ್ಲಿ ನಿರ್ಮಾಪಕರ ಸಂಘದ ಚಟುವಟಿಕೆಗಳು ನಡೆಯಲಿದೆ.

Related Posts

error: Content is protected !!