‘ಅಣ್ತಮ್ಮ’ನಾದ ಅಚ್ಯುತ್ ಕುಮಾರ್-ಗೋಪಾಲಕೃಷ್ಣ ದೇಶಪಾಂಡೆ!

ಅಚ್ಯುತ ಕುಮಾರ್-ಗೋಪಾಲಕೃಷ್ಣ ದೇಶಪಾಂಡೆ ಮುಖ್ಯಭೂಮಿಕೆಯ ಹೊಸಚಿತ್ರ
ಯುವ ಪ್ರತಿಭೆ ವಿಶ್ವ ನಿರ್ದೇಶನದ ಚೊಚ್ಚಲ ಸಿನೆಮಾ ‘ಅಣ್ತಮ್ತನ’
‘ಅಣ್ತಮ್ತನ’ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ
‘ಪೇಟಾ’ಸ್ ಸಿನಿ ಕೆಫೆ’ ಮತ್ತು ‘ಫಿಲ್ಮಿ ಮಾಂಕ್’ ಸಹಯೋಗದೊಂದಿಗೆ ನಿರ್ಮಾಣವಾಗುತ್ತಿರುವ ಹೊಸ ಸಿನೆಮಾಕ್ಕೆ ‘ಅಣ್ತಮ್ತನ’ ಎಂದು ಹೆಸರಿಡಲಾಗಿದ್ದು, ಇತ್ತೀಚೆಗೆ ಈ ಸಿನೆಮಾದ ಟೈಟಲ್ ಬಿಡುಗಡೆಯಾಗಿದೆ. ‘ಅಣ್ತಮ್ತನ’ ಈ ಹಿಂದೆ ‘ಕಿರಾತಕ’ ಪ್ರದೀಪ್ ರಾಜ್, ಪಿ. ಸಿ ಶೇಖರ್, ಪ್ರಶಾಂತ್ ರಾಜಪ್ಪ ನಿರ್ದೇಶನ ತಂಡದಲ್ಲಿ ಕೆಲಸ ಮಾಡಿದ ಅನುಭವ ಇರುವ ವಿಶ್ವ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ.
ಅಚ್ಯುತಕುಮಾರ್ – ಗೋಪಾಲ ದೇಶಪಾಂಡೆ ಜುಗಲ್ಬಂದಿ
ಈ ಚಿತ್ರದಲ್ಲಿ ಬಹುಭಾಷಾ ನಟ ಅಚ್ಯುತ್ ಕುಮಾರ್ ಮತ್ತು ಬಹುಬೇಡಿಕೆಯ ನಟ ಗೋಪಾಲಕೃಷ್ಣ ದೇಶಪಾಂಡೆ ಅಣ್ಣ-ತಮ್ಮಂದಿರಾಗಿ ಮುಖ್ಯಭೂಮಿಕೆಯಲ್ಲಿ ಮತ್ತು ‘ಒಂದ್ ಕಥೆ ಹೇಳ್ಲಾ’ ಹಾಗೂ ‘ಶಾಲಿವಾಹನ ಶಕೆ’ ಖ್ಯಾತಿಯ ಗಿರೀಶ್ ಜಿ. ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿಶ್ವಜಿತ್ ರಾವ್ ಛಾಯಾಗ್ರಹಣ, ಪೂರ್ಣಚಂದ್ರ ತೇಜಸ್ವಿ ಎಸ್. ವಿ ಅವರ ಸಂಗೀತ, ಶೈಲೇಶ್ ಕುಮಾರ್ ಸಂಭಾಷಣೆ, ಹರಿ ಪರಾಕ್ ಸಾಹಿತ್ಯ ಇರುವ ಚಿತ್ರ ‘ಅಣ್ತಮ್ತನ’.
ಅಪ್ಪಟ ಗ್ರಾಮೀಣ ಸೊಗಡಿನ ಚಿತ್ರ
ಈ ಚಿತ್ರ ಅಣ್ಣ-ತಮ್ಮ ಸಂಬಂಧ, ನಮ್ಮ ಮಣ್ಣಿನ ಆಚರಣೆ, ಹಳೆ ಮೈಸೂರು ಸಂಸ್ಕೃತಿ, ನಂಬಿಕೆ ಮೂಢನಂಬಿಕೆಗಳ ಸುತ್ತ ಹೆಣೆದಿರುವ ಕಥೆ ಹೊಂದಿದೆ. ಆದಿಚುಂಚನಗಿರಿ, ನಾಗಮಂಗಲ, ಮದ್ದೂರು, ಮಂಡ್ಯ ಸುತ್ತ-ಮುತ್ತ ಚಿತ್ರೀಕರಣ ನಡೆಯಲಿದ್ದು, ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.