Pop Corner

‘ಮರ್ಯಾದೆ ಪ್ರಶ್ನೆ’ ಸಿನೆಮಾದ ಪ್ರೇಮಗೀತೆ ಬಿಡುಗಡೆ

‘ಮರ್ಯಾದೆ ಪ್ರಶ್ನೆ’ ಸಿನೆಮಾದ ಎರಡನೇ ಹಾಡು‌ ಹೊರಗೆ

ವಾಸುಕಿ ವೈಭವ್ – ಶ್ರೀಲಕ್ಷ್ಮಿ ದನಿಯಲ್ಲಿ ಮತ್ತೊಂದು ಮೆಲೋಡಿ ಗೀತೆ

ಈಗಾಗಲೇ ಬಿಡುಗಡೆಯಾಗಿರುವ ತನ್ನ ಪೋಸ್ಟರ್, ಹಾಡು ಮತ್ತು ಫ್ಯಾಮಿಲಿ, ಪ್ರೆಂಡ್‌ಶಿಪ್ ನಂತಹ ನವಿರಾದ ವಿಷಯಗಳ ಮೂಲಕ ಸ್ಯಾಂಡಲ್‌ ವುಡ್‌ ಅಂಗಳದಲ್ಲಿ ಒಂದಷ್ಟು ನಿರೀಕ್ಷೆ ಹುಟ್ಟಿಸಿರುವ ‘ಮರ್ಯಾದೆ ಪ್ರಶ್ನೆ’ ಸಿನೆಮಾದ ಎರಡನೇ ಹಾಡು‌ ‘ನಾ ನಿನಗೆ, ನೀ‌ ನನಗೆ’ ಈಗ ಬಿಡುಗಡೆಯಾಗಿದೆ.

ಮಹಾನಗರದ ಮಿಡಲ್ ಕ್ಲಾಸ್ ಪ್ರೇಮಗೀತೆ!

ನಟ ಶರಣ್ ದನಿಯಲ್ಲಿ ಮೂಡಿಬಂದ ಈ ಸಿನಿಮಾದ ಮೊದಲ‌ ಹಾಡು ‘ಈಸಿ ಟೇಕ್ ಇಟ್ ಈಸಿ’ ಸಾಹಿತ್ಯಕ್ಕೆ‌‌‌ ಈಗಾಗಲೇ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದ್ದು, ಎರಡನೇ ಹಾಡು ‘ನಾ ನಿನಗೆ, ನೀ ನನಗೆ’ ಪೂರ್ಣಚಂದ್ರ ಮತ್ತು ತೇಜು ಬೆಳವಾಡಿ ಜೋಡಿಯ ನಡುವಿನ ಪ್ರೇಮದ ಸನ್ನಿವೇಶಗಳನ್ನು ಸೆರೆ ಹಿಡಿದಿದೆ. ಬಸವನಗುಡಿ, ಗಾಂಧಿ ಬಜಾರಿನಲ್ಲಿ ಚಿತ್ರಿಸಿರುವ ಈ ಹಾಡು ಬೆಂಗಳೂರಿನ ಮಿಡಲ್ ಕ್ಲಾಸ್ ಪ್ರೇಮದ ಅಚ್ಚಂತಿದೆ. ಅರ್ಜುನ್ ರಾಮು ರಾಗ ಸಂಯೋಜಿಸಿ, ಪ್ರಮೋದ್ ಮರವಂತೆ ಸಾಹಿತ್ಯ ಬರೆದಿರುವ ಈ ಹಾಡಿಗೆ ವಾಸುಕಿ ವೈಭವ್ ಮತ್ತು ಶ್ರೀಲಕ್ಷ್ಮಿ ಬೆಳ್ಮಣ್ಣು ದನಿಯಾಗಿದ್ದಾರೆ.

‘ಮರ್ಯಾದೆ ಪ್ರಶ್ನೆ’ ಸಿನೆಮಾದ ‘ನಾ ನಿನಗೆ, ನೀ‌ ನನಗೆ’ ರೊಮ್ಯಾಂಟಿಕ್‌ ಹಾಡಿನ ಲಿರಿಕಲ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಬಹುದು…

 

“ಈ ಹಾಡಿಗಾಗಿ ತುಂಬಾ ಸುಂದರವಾದ ವಿಶುವಲ್ಸ್ ಶೂಟ್ ಮಾಡಿದ್ದರು. ಅಷ್ಟೇ ಸುಂದರವಾಗಿ ಹಾಡುವ ಜವಾಬ್ದಾರಿ ನನ್ನ ಮತ್ತು ಶ್ರೀಲಕ್ಷ್ಮಿಯವರ ಮೇಲಿತ್ತು. ನಾವಿಬ್ಬರೂ‌ ಈ ಹಾಡಿಗೆ ನ್ಯಾಯ ಒದಗಿಸಿದ್ದೇವೆ ಎಂಬ ನಂಬಿಕೆ ಇದೆ” ಎಂದು ಗಾಯಕ ವಾಸುಕಿ ವೈಭವ್ ಹೇಳಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಈ ಹಾಡನ್ನು ‘ಸಕ್ಕತ್ ಸ್ಟುಡಿಯೋ’ ಯು-ಟೂಬ್ ಚಾನೆಲ್ ನಲ್ಲಿ ವೀಕ್ಷಿಸಬಹುದು.

ರಿವೇಂಜ್‌ ಡ್ರಾಮಾ, ಬೃಹತ್‌ ತಾರಾಗಣ…

ರಿಯಲಿಸ್ಟಿಕ್ ರಿವೇಂಜ್ ಡ್ರಾಮಾ ಶೈಲಿಯ ‘ಮರ್ಯಾದೆ ಪ್ರಶ್ನೆ’ ಚಿತ್ರದ ತಾರಾಗಣದಲ್ಲಿ ತೇಜು ಬೆಳವಾಡಿ, ಸುನಿಲ್ ರಾವ್, ಪೂರ್ಣಚಂದ್ರ ಮೈಸೂರು, ರಾಕೇಶ್ ಅಡಿಗ, ಶೈನ್ ಶೆಟ್ಟಿ, ಪ್ರಭು ಮುಂಡ್ಕುರ್  ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಹಿರಿಯ ನಟರಾದ ನಾಗಾಭರಣ, ಪ್ರಕಾಶ್ ತುಂಭಿನಾಡು, ನಂದಗೋಪಾಲ್, ನಾಗೇಂದ್ರ ಷಾ, ರೇಖಾ ಕೂಡ್ಲಗಿ, ಶ್ರವಣ್, ಹರಿಹರನ್ ಮುಂತಾದವರು ಸಿನೆಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

‘ಮರ್ಯಾದೆ ಪ್ರಶ್ನೆ’ ಚಿತ್ರದಲ್ಲಿ ಐದು ಹಾಡುಗಳಿದ್ದು ಎಲ್ಲಾ ಹಾಡುಗಳಿಗೆ ಅರ್ಜುನ್ ರಾಮು ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಪ್ರಮೋದ್ ಮರವಂತೆ, ತ್ರಿಲೋಕ್ ತ್ರಿವಿಕ್ರಮ ಮತ್ತು ಪಾಶಾಬಾಯ್ ಸಾಹಿತ್ಯ ರಚಿಸಿದ್ದಾರೆ. ‘ಸಕುಟುಂಬ ಸಮೇತ ‘, ‘ಗೌಳಿ ‘ ಮತ್ತು  ‘ಚಾರ್ಲಿ ‘ ಸಿನೆಮಾಗೆ ಕೆಲಸ ಮಾಡಿರುವ ಸಂದೀಪ್ ವೆಲ್ಲುರಿ ಈ ಸಿನಿಮಾದ ಛಾಯಾಗ್ರಹಕರು.

ನವೆಂಬರ್ 22ಕ್ಕೆ  ‘ಮರ್ಯಾದೆ ಪ್ರಶ್ನೆ’ ತೆರೆಗೆ

‘ದಿ ಬೆಸ್ಟ್ ಆ್ಯಕ್ಟರ್’ ಮೈಕ್ರೋ ಮೂವಿ ನಿರ್ದೇಶಕ ನಾಗರಾಜ ಸೋಮಯಾಜಿ ನಿರ್ದೇಶನದ ಚಲನಚಿತ್ರವಿದು. ಈಗಾಗಲೇ  ‘ಲೂಸ್ ಕನೆಕ್ಷನ್ ‘,  ‘ಹನಿಮೂನ್ ‘ ವೆಬ್ ಸೀರೀಸ್ ಗಳನ್ನು ನಿರ್ಮಿಸಿ ಸದ್ದು ಮಾಡಿದ್ದ ಆರ್‌. ಜೆ ಪ್ರದೀಪ ಅವರ ‘ಸಕ್ಕತ್ ಸ್ಟೂಡಿಯೋ’ ಈ ಚಿತ್ರವನ್ನು ನಿರ್ಮಿಸಿದೆ. ಈ ಸಿನಿಮಾದ ಕತೆಯನ್ನು ಕೂಡ ಪ್ರದೀಪ ಅವರೇ ಬರೆದಿದ್ದಾರೆ.  ‘ಮರ್ಯಾದೆ ಪ್ರಶ್ನೆ’ ಚಿತ್ರ ಇದೇ ನವೆಂಬರ್ 22ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Related Posts

error: Content is protected !!