ಮತ್ತೆ ಕನ್ನಡ ಹಿರಿತೆರೆಯತ್ತ ‘ಚೈತ್ರದ ಪ್ರೇಮಾಂಜಲಿ’ ಖ್ಯಾತಿಯ ಶ್ವೇತಾ!

ಎರಡು ದಶಕದ ಬಳಿಕ ಕನ್ನಡ ಸಿನಿಪ್ರಿಯರ ಮುಂದೆ ಶ್ವೇತಾ ದರ್ಶನ
‘ಚೌಕಿದಾರ್’ ಸಿನೆಮಾ ಮೂಲಕ ಮತ್ತೆ ಶ್ವೇತಾ ರೀ-ಎಂಟ್ರಿ…
ಎರಡು ದಶಕದ ಬಳಿಕ ಚಂದನವನಕ್ಕೆ ಶ್ವೇತಾಗಮನ
90ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ‘ಚೈತ್ರದ ಪ್ರೇಮಾಂಜಲಿ’, ‘ಕರ್ಪೂರದ ಗೊಂಬೆ’, ‘ಲಕ್ಷ್ಮಿ ಮಹಾಲಕ್ಷ್ಮಿ’ ಸೇರಿದಂತೆ ಹಲವು ಸೂಪರ್ ಹಿಟ್ ಸಿನೆಮಾಗಳಲ್ಲಿ ಅಭಿನಯಿಸಿ ಸಿನಿ ಪ್ರೇಕ್ಷಕರ ಮನ ಮತ್ತು ಗಮನ ಎರಡನ್ನೂ ಸೆಳೆದಿದ್ದ ನಟಿ ಶ್ವೇತಾ ಉರೂಫ್ ವಿನೋದಿನಿ. ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ವಿನೋದಿನಿ ಎಂಬ ಹೆಸರಿನಲ್ಲಿ ಜನಪ್ರಿಯತೆ ಪಡೆದಿರುವ ಈ ನಟಿ ಕನ್ನಡ ಚಿತ್ರರಂಗದಲ್ಲಿ ಮಾತ್ರ ಇಂದಿಗೂ ‘ಚೈತ್ರದ ಪ್ರೇಮಾಂಜಲಿ’ ಶ್ವೇತಾ ಎಂದೇ ಖ್ಯಾತರಾಗಿರುವ ನಟಿ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಸೇರಿದಂತೆ ದಕ್ಷಿಣ ಭಾರತದ ವಿವಿಧ ಭಾಷೆಗಳಲ್ಲಿ ಸುಮಾರು 75 ಚಲನಚಿತ್ರಗಳಲ್ಲಿ ನಟಿಸಿರು ಈ ಬಹುಭಾಷಾ ನಟಿ ಶ್ವೇತಾ ಉರೂಫ್ ವಿನೋದಿನಿ ಬರೋಬ್ಬರಿ 20 ವರ್ಷಗಳ ನಂತರ ಮತ್ತೆ ಕನ್ನಡ ಚಿತ್ರರಂಗದತ್ತ ಮುಖ ಮಾಡಿದ್ದಾರೆ.
ಕಿರುತೆರೆಯಿಂದ, ಹಿರಿತೆರೆಯತ್ತ…
ಅಂದಹಾಗೆ, ಶ್ವೇತಾ 2003 ರಲ್ಲಿ ತೆರೆಕಂಡ ‘ಕುಟುಂಬ’ ಸಿನೆಮಾದಲ್ಲಿ ಕೊನೆಯ ಬಾರಿಗೆ ಅಭಿನಯಿಸಿದ್ದರು. 20 ವರ್ಷಗಳ ವಿರಾಮದ ನಂತರ ಮತ್ತೆ ನಟನೆಗೆ ಮರಳಿದ್ದ ಶ್ವೇತಾ, ಸದ್ಯ ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿದ್ದು, ‘ಲಕ್ಷ್ಮಿ ನಿವಾಸ’ ಎಂಬ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಧಾರಾವಾಹಿಯ ಮೂಲಕ ಕಿರುತೆರೆ ಪ್ರೇಕ್ಷಕರನ್ನು ಸೆಳೆದಿರುವ ಶ್ವೇತಾ ಅವರೀಗ ‘ಚೌಕಿದಾರ್’ ಎಂಬ ಹೊಸ ಸಿನೆಮಾ ಒಪ್ಪಿಕೊಂಡಿದ್ದಾರೆ.
ಈಗಾಗಲೇ ‘ಚೌಕಿದಾರ್’ ಸಿನೆಮಾದ ಟೈಟಲ್ ಹಾಗೂ ಪೋಸ್ಟರ್ ಒಂದಷ್ಟು ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿದ್ದು, ಇದೀಗ ಈ ಸಿನೆಮಾದ ಪ್ರಮುಖ ಪಾತ್ರವೊಂದರಲ್ಲಿ ಶ್ವೇತಾ ಅಭಿನಯಿಸುತ್ತಿದ್ದಾರೆ. ಇನ್ನು ತಮ್ಮ ವೃತ್ತಿಜೀವನದಲ್ಲಿ ಹೊಸ ಅಧ್ಯಾಯವನ್ನು ಕನ್ನಡ ಕಿರುತೆರೆಯ ಮೂಲಕ ಮತ್ತೆ ಆರಂಭಿಸಿರುವ ಶ್ವೇತಾ, ಇದೀಗ ಬಹಳ ಇಷ್ಟಪಟ್ಟು ‘ಚೌಕಿದಾರ್’ ಸಿನೆಮಾ ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ. ಸದ್ಯ ಸೀರಿಯಲ್ ನಲ್ಲಿ ಬ್ಯುಸಿಯಾಗಿರುವ ಶ್ವೇತಾ ಈಗ ಲಾಂಗ್ ಗ್ಯಾಪ್ ಬಳಿಕ ಸಿನೆಮಾ ಒಪ್ಪಿಕೊಂಡಿರುವುದು ಸಹಜವಾಗಿಯೇ ಒಂದಷ್ಟು ನಿರೀಕ್ಷೆ ಹೆಚ್ಚಿಸಿದೆ.
ಭರದಿಂದ ಸಾಗಿದ ‘ಚೌಕಿದಾರ್’ ಚಿತ್ರೀಕರಣ
ಪ್ರೀತಿ-ಪ್ರೇಮದಂತಹ ಕಥೆಯಲ್ಲಿ ಅಭಿನಯಿಸಿದ್ದ ಪೃಥ್ವಿ ಅಂಬಾರ್ ‘ಚೌಕಿದಾರ್’ ಸಿನೆಮಾ ಮೂಲಕ ರಗಡ್ ಅವತಾರ ತಾಳಿದ್ದಾರೆ. ಪ್ರತಿ ಬಾರಿಯೂ ಹೊಸ ಕಥೆಯನ್ನು ಹೆಕ್ಕಿ ತರುವ ಚಂದ್ರಶೇಖರ್ ಬಂಡಿಯಪ್ಪ ಈ ಬಾರಿ ಕೂಡ ಫ್ರೆಶ್ ಕಥೆಯೊಂದಿಗೆ ಹಾಜರಾಗಿದ್ದಾರೆ. ‘ಚೌಕಿದಾರ್’ ಸಿನೆಮಾದಲ್ಲಿ ಧನ್ಯಾ ರಾಮಕುಮಾರ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ತುಂಬಾ ದಿನಗಳ ಬಳಿಕ ಹಿರಿಯ ನಟ ಸಾಯಿ ಕುಮಾರ್ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
‘ಚೌಕಿದಾರ್’ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಕೊಡುತ್ತಿದ್ದಾರೆ. ಸಿದ್ದು ಕಂಚನಹಳ್ಳಿ ಕ್ಯಾಮೆರಾ, ಪ್ರಮೋದ್ ಮರವಂತೆ, ಸಂತೋಷ್ ನಾಯಕ್, ವಿ. ನಾಗೇಂದ್ರ ಪ್ರಸಾದ್ ಗೀತರಚನೆ ಮಾಡುತ್ತಿದ್ದಾರೆ. ಬಹು ಭಾಷೆಯಲ್ಲಿಯೇ ಈ ಸಿನಿಮಾ ಮೂಡಿ ಬರುತ್ತಿದೆ. ಶಿಕ್ಷಣ ತಜ್ಞರಾದ ಕಲ್ಲಹಳ್ಳಿ ಚಂದ್ರಶೇಖರ್ ತಮ್ಮ ‘ವಿ. ಎಸ್. ಎಂಟರ್ ಟೈನ್ಮೆಂಟ್’ ಬ್ಯಾನರ್ ಮೂಲಕ ‘ಚೌಕಿದಾರ್’ ಸಿನೆಮಾ ನಿರ್ಮಾಣ ಮಾಡುತ್ತಿದ್ದಾರೆ.