‘ವಿದ್ಯಾಪತಿ’ ಮೊದಲ ಹಾಡು ರಿಲೀಸ್…

ಕರಾಟೆ ತರಗತಿಯಲ್ಲಿ ‘ವಿದ್ಯಾಪತಿ’ಯ ತಲೆಹರಟೆ…
ನಾಗಭೂಷಣ್ ಕಿತಾಪತಿ ಸಿನೆಮಾ ಹಾಡಿಗೆ ಕಂಠ ಕುಣಿಸಿದ ಜಗ್ಗೇಶ್
ಹಾಡಿನಲ್ಲಿ ‘ ವಿದ್ಯಾಪತಿ’ … ನಾಗಭೂಷಣನ ನಾನಾ ಕಿತಾಪತಿ
ನಟ ಡಾಲಿ ಧನಂಜಯ್ ನಿರ್ಮಾಣದಲ್ಲಿ ‘ವಿದ್ಯಾಪತಿ’ ಸಿನೆಮಾ ತೆರೆಗೆ ಬಾರುತ್ತಿರುವ ವಿಷಯ ಅನೇಕರಿಗೆ ಗೊತ್ತಿರಬಹುದು. ಈಗಾಗಲೇ ‘ವಿದ್ಯಾಪತಿ’ ಸಿನೆಮಾದ ಟೈಟಲ್, ಟೀಸರ್, ಮೇಕಿಂಗ್ ನಿಂದಲೇ ಗಮನಸೆಳೆದಿರುವ ‘ವಿದ್ಯಾಪತಿ’ ಸಿನೆಮಾದ ಮೊದಲ ಹಾಡು ಇದೀಗ ಬಿಡುಗಡೆಯಾಗಿದೆ. ಕರಾಟೆ ತರಗತಿಯಲ್ಲಿ ‘ವಿದ್ಯಾಪತಿ’ಯ ತಲೆಹರಟೆಯ ಹಾಡಿಗೆ ನವರಸ ನಾಯಕ ಜಗ್ಗೇಶ್ ಧ್ವನಿಯಾಗಿದ್ದಾರೆ. ‘ಅಯ್ಯೋ ವಿಧಿಯೇ…’ ಎಂದು ಶುರುವಾಗುವ ಹಾಡಿಗೆ ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಡಾಸ್ಮೋಡ್ ಸಂಗೀತ ಸಂಯೋಜಿಸಿದ್ದು, ಕೇಳುಗರಿಗೆ ಈ ಹಾಡು ಸಖತ್ ಕಿಕ್ ಕೊಡುವಂತಿದೆ. ಸಖತ್ ಫನ್ ಆಗಿ ಮೂಡಿಬಂದಿರುವ ‘ವಿದ್ಯಾಪತಿ’ ಸಿನೆಮಾದ ಈ ಗೀತೆಯಲ್ಲಿ ರಂಗಾಯಣ ರಘು ಕೂಡ ಹೆಜ್ಜೆ ಹಾಕಿರುವುದು ವಿಶೇಷ.
‘ವಿದ್ಯಾಪತಿ’ ಸಿನೆಮಾದ ‘ಅಯ್ಯೋ ವಿಧಿಯೇ…’ ಹಾಡಿನ ಸಂಪೂರ್ಣ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಬಹುದು…
ಇನ್ನು ‘ಟಗರು ಪಲ್ಯ’ ಮೂಲಕ ಮಸ್ತ್ ಮನರಂಜನೆ ನೀಡಿದ್ದ ನಾಗಭೂಷಣ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ‘ಉಪಾಧ್ಯಕ್ಷ’ನ ಬೆಡಗಿ ಮಲೈಕಾ ವಸೂಪಾಲ್ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಕರಾಟೆ ಕಿಂಗ್ ಗೆಟಪ್ ನಲ್ಲಿ ನಾಗಭೂಷಣ್ ಕಾಣಿಸಿಕೊಳ್ಳುತ್ತಿದ್ದು, ಅವರಿಗೆ ಮಾಸ್ಟರ್ ಆಗಿ ಹಿರಿಯ ನಟ ರಂಗಾಯಣ ರಘು ಅಭಿನಯಿಸಿದ್ದಾರೆ. ಸದ್ಯ ಬಿಡುಗಡೆಯಾಗಿರುವ ‘ವಿದ್ಯಾಪತಿ’ ಸಿನೆಮಾದ ಮೊದಲ ಹಾಡು ನೋಡುಗರಿಗೆ ಒಂದಷ್ಟು ಕಚಗುಳಿ ಕೊಡುವಂತಿದೆ.
ಆ್ಯಕ್ಷನ್ ಕಂ ಕಾಮಿಡಿ ಕಥಾಹಂದರದ ‘ವಿದ್ಯಾಪತಿ’
ಈ ಹಿಂದೆ ‘ಇಕ್ಕಟ್’ ಸಿನಿಮಾ ಮೂಲಕ ಭರವಸೆ ಹುಟ್ಟಿಸಿದ್ದ ಇಶಾಂ ಮತ್ತು ಹಸೀಂ ಖಾನ್ ‘ವಿದ್ಯಾಪತಿ’ ಸಿನಿಮಾಗೆ ಆ್ಯಕ್ಷನ್- ಕಟ್ ಹೇಳಿದ್ದಾರೆ. ಜೊತೆಗೆ, ಸಿನಿಮಾವನ್ನು ಇವರೇ ಬರೆದು, ಸಂಕಲನದ ಜವಾಬ್ದಾರಿಯನ್ನೂ ತಾವೇ ಹೊತ್ತುಕೊಂಡಿದ್ದಾರೆ. ಚಿತ್ರಕ್ಕೆ ಲವಿತ್ ಅವರ ಛಾಯಾಗ್ರಹಣ ಇದೆ. ಡಾಸ್ಮೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಅರ್ಜುನ್ ಮಾಸ್ಟರ್ ಆ್ಯಕ್ಷನ್ ವಿದ್ಯಾಪತಿ ಸಿನಿಮಾಗಿದೆ. ‘ಟಗರು ಪಲ್ಯ’ ಸಿನಿಮಾ ನಿರ್ಮಾಣ ಮಾಡಿದ್ದ ಡಾಲಿ ಧನಂಜಯ್ ಇದೀಗ ‘ವಿದ್ಯಾಪತಿ’ ಪ್ರೊಡ್ಯೂಸ್ ಮಾಡುತ್ತಿದ್ದಾರೆ. ಚಿತ್ರದಲ್ಲಿ ಆ್ಯಕ್ಷನ್ ಜೊತೆಗೆ ಹಾಸ್ಯವೂ ಇರಲಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಮುಂದಿನ ವರ್ಷದ ಆರಂಭದಲ್ಲಿ ‘ವಿದ್ಯಾಪತಿ’ ಸಿನೆಮಾ ತೆರೆಗೆ ಬರುವ ಸಾಧ್ಯತೆಯಿದೆ.