‘ಮರ್ಯಾದೆ ಪ್ರಶ್ನೆ’ ಟ್ರೇಲರ್ ಬಿಡುಗಡೆ

ಟ್ರೇಲರ್ ಬಿಡುಗಡೆ ಮಾಡಿದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್
‘ಮರ್ಯಾದೆ ಪ್ರಶ್ನೆ’ ಎಂಬ ರಿಯಲಿಸ್ಟಿಕ್ ರಿವೆಂಜ್ ಡ್ರಾಮಾ…
ಕಿಚ್ಚ ಮೆಚ್ಚಿದ ಟ್ರೇಲರ್…
ರಿಯಲಿಸ್ಟಿಕ್ ರಿವೆಂಜ್ ಡ್ರಾಮಾ ಶೈಲಿಯ ‘ಮರ್ಯಾದೆ ಪ್ರಶ್ನೆ’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ನಟ ಕಿಚ್ಚ ಸುದೀಪ್ ‘ಮರ್ಯಾದೆ ಪ್ರಶ್ನೆ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇನ್ನು ‘ಮರ್ಯಾದೆ ಪ್ರಶ್ನೆ’ ಚಿತ್ರದ ಟ್ರೇಲರ್ ಬಗ್ಗೆ ಮಾತನಾಡಿರುವ ನಟ ಸುದೀಪ್, ‘ಟ್ರೇಲರ್ ನನಗೆ ತುಂಬಾ ಇಷ್ಟವಾಯಿತು. ಸಾಕಷ್ಟು ವಿಚಾರ ತಿಳಿಸಿಯೂ ಕೂಡ ಕುತೂಹಲ ಹುಟ್ಟಿಸುವಂತೆ ಟ್ರೇಲರ್ ಕಟ್ ಮಾಡಿರುವುದು ನನಗೆ ಹಿಡಿಸಿತು. ಈ ಸಿನಿಮಾದಲ್ಲಿ ವಿಭಿನ್ನತೆ ಇದೆ. ಎಲ್ಲಾ ವಿಭಾಗಗಳ ಕೆಲಸವು ಅದ್ಭುತವಾಗಿದೆ. ಕನ್ನಡ ಇಂಡಸ್ಟ್ರಿ ನಡೆಯುತ್ತಿರುವ ದಾರಿಯ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದಿದ್ದಾರೆ.
ಸದ್ಯ ಬಿಡುಗಡೆಯಾಗಿರುವ ‘ಮರ್ಯಾದೆ ಪ್ರಶ್ನೆ’ ಚಿತ್ರದ ಟ್ರೇಲರಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಸುಮಾರು 300ಕ್ಕೂ ಅಧಿಕ ಆರ್.ಜೆ ಗಳು, ಗಾಯಕರು, ನಟ-ನಟಿಯರು, ಡಾಕ್ಟರ್ಗಳು, ವಕೀಲರು, ಉದ್ಯಮಿಗಳು ಸಿನೆಮಾದ ಟ್ರೇಲರ್ ಮೆಚ್ಚಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
‘ಮರ್ಯಾದೆ ಪ್ರಶ್ನೆ’ ಚಿತ್ರದ ಟ್ರೇಲರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಬಹುದು…
‘ಮರ್ಯಾದೆ ಪ್ರಶ್ನೆ’ ಚಿತ್ರಕ್ಕೆ ಯುವ ನಿರ್ದೇಶಕರ ಬೆಂಬಲ
ಹೊಸ ಅಲೆಯ ಕನ್ನಡ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ಕನ್ನಡದ ಯುವ ನಿರ್ದೇಶರಾದ ಶಶಾಂಕ್ ಸೋಘಲ್, ಸಿಂಧು ಶ್ರೀನಿವಾಸ್ ಮೂರ್ತಿ, ನಿತಿನ್ ಕೃಷ್ಣಮೂರ್ತಿ, ಉಮೇಶ್ ಕೆ. ಕೃಪಾ, ರಾಮೇನಹಳ್ಳಿ ಜಗನ್ನಾಥ, ಶ್ರೀನಿಧಿ ಬೆಂಗಳೂರು, ಸಂದೀಪ್ ಸುಂಕದ, ಚಂದ್ರಜಿತ್ ಬೆಳ್ಳಿಯಪ್ಪ, ರಾಜ್ ಗುರು ಭೀಮಪ್ಪ, ಎಂ. ಭರತ್ ರಾಜ್, ಬಿ. ಎಸ್. ಪಿ ವರ್ಮಾ, ಉತ್ಸವ್ ಗೊನ್ವರ್, ಜೈಶಂಕರ್ ಆರ್ಯರ್, ಸುನೀಲ್ ಮೈಸೂರು, ಅಕರ್ಶ್ ಹೆಚ್. ಪಿ, ವಿಕ್ಕಿ ವರುಣ್, ಸಾಗರ್ ಪುರಾಣಿಕ್, ಪ್ರತೀಕ್ ಪ್ರಜೋಶ್ ಮತ್ತು ಇನ್ನೂ ಹಲವರು ‘ಮರ್ಯಾದೆ ಪ್ರಶ್ನೆ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ‘ಮರ್ಯಾದೆ ಪ್ರಶ್ನೆ’ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಇದೇ ನವೆಂಬರ್ 22ಕ್ಕೆ ‘ಮರ್ಯಾದೆ ಪ್ರಶ್ನೆ’ ಬಿಡುಗಡೆ
‘ಮರ್ಯಾದೆ ಪ್ರಶ್ನೆ’ ಸಿನೆಮಾದ ಬಗ್ಗೆ ಮಾತನಾಡಿದ ನಿರ್ದೇಶಕ ನಾಗರಾಜ ಸೋಮಯಾಜಿ, ‘ತಮ್ಮ ಸುತ್ತಮುತ್ತಲಿನ ಕಥೆಗಳನ್ನ ಜನರು ತುಂಬಾ ಇಷ್ಟಪಡುತ್ತಾರೆ. ಅದನ್ನ ಸಿನಿಮಾ ಮಾಡುವಾಗ ತುಂಬಾ ನೈಜವಾಗಿ ಮೂಡಿ ಬಂದರೆ, ನೋಡುವವರಿಗೂ ಸಹ ಹತ್ತಿರ ಅನಿಸತ್ತೆ ಅನ್ನೋದು ನನ್ನ ಅನಿಸಿಕೆ. ನಮ್ಮ ಕನ್ನಡದ ಪ್ರೇಕ್ಷಕರು ಇವತ್ತಿನ ತನಕ ಒಳ್ಳೆಯ ಸಬ್ಜೆಕ್ಟ್ಗಳನ್ನ ಯಾವತ್ತೂ ಬಿಟ್ಟುಕೊಟ್ಟಿಲ್ಲ. ಹಾಗಾಗಿಯೇ ನಮ್ಮ ಕನ್ನಡ ಸಿನೆಮಾಗಳು ಪ್ರಪಂಚದಾದ್ಯಂತ ತಲುಪೋಕೆ ಸಾಧ್ಯ ಆಗಿರೋದು. ಹಾಗೆಯೇ ಕಲಾವಿದರಿಗೆ ನಟನೆ ಹೇಖಿಕೊಡುವುದರ ಬದಲು ನಮ್ಮ ಕಥೆಯ ಸಂದರ್ಭಕ್ಕೆ ಜೀವಿಸೋದನ್ನ ಅರ್ಥ ಮಾಡಿಸಿದರೆ ಸಾಕು ಅವರೇ ನಮನ್ನ ದಡ ಮುಟ್ಟಿಸುತ್ತಾರೆ’ ಎಂದಿದ್ದಾರೆ.
‘ಸಕ್ಕತ್ ಸ್ಟುಡಿಯೋ’ ಬ್ಯಾನರಿನಡಿ ಆರ್. ಜೆ ಪ್ರದೀಪಾ ಈ ಸಿನೆಮಾವನ್ನು ನಿರ್ಮಾಣ ಮಾಡಿದ್ದಾರೆ. ‘ನಮ್ಮ ಸಂಸ್ಥೆ ಹೊಸತನದ, ನೆಲಮೂಲದ, ರಿಲೇಟ್ ಆಗುವ ರಿಯಲಿಸ್ಟಿಕ್ ಕಥೆಗಳನ್ನು ಜಾಗತಿಕ ಪ್ರೇಕ್ಷಕರಿಗೆ ಸುಂದರವಾಗಿ ಪ್ಯಾಕೇಜ್ ಮಾಡಿ ಪ್ರಸ್ತುತಪಡಿಸುವ ಕನಸು ಹೊತ್ತಿದೆ. ನಮ್ಮ ಮೊದಲ ಹೆಜ್ಜೆಯಾದ ‘ಮರ್ಯಾದೆ ಪ್ರಶ್ನೆ’ ಬಗ್ಗೆ ನಮಗೆ ತುಂಬಾ ವಿಶ್ವಾಸವಿದ್ದು, ಪ್ರತಿ ವರ್ಷ ಕನಿಷ್ಠ ಎರಡು ಇಂತಹ ಪ್ರಮಾಣಿಕ ಪ್ರಾಜೆಕ್ಟ್ಗಳನ್ನು ಕೈಗೆತ್ತಿಕೊಳ್ಳುವ ಆಶಯವಿದೆ. ಇವು ಜನತೆಯ ಮನ ತಾಕುವುದರ ಜತೆ ಚರ್ಚೆಗಳನ್ನು ಹುಟ್ಟುಹಾಕಲಿವೆ’ ಎಂದಿದ್ದಾರೆ.
‘ಮರ್ಯಾದೆ ಪ್ರಶ್ನೆ’ ಚಿತ್ರದಲ್ಲಿ ತೇಜು ಬೆಳವಾಡಿ, ಸುನಿಲ್ ರಾವ್, ಪೂರ್ಣಚಂದ್ರ ಮೈಸೂರು, ರಾಕೇಶ್ ಅಡಿಗ, ಶೈನ್ ಶೆಟ್ಟಿ, ಪ್ರಭು ಮುಂಡ್ಕುರ್ ಪ್ರಮುಖ ಪಾತ್ರಗಳಲ್ಲಿ ಇದ್ದಾರೆ. ಉಳಿದಂತೆ ಹಿರಿಯ ನಟರಾದ ನಾಗಾಭರಣ, ಪ್ರಕಾಶ್ ತುಂಭಿನಾಡು, ನಂದಗೋಪಾಲ್, ನಾಗೇಂದ್ರ ಷಾ, ರೇಖಾ ಕೂಡ್ಲಿಗಿ, ಶ್ರವಣ್, ಹರಿಹರನ್ ಮುಂತಾದವರು ಇತರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಅರ್ಜುನ್ ರಾಮು ರಾಗ ಸಂಯೋಜಿಸಿದ್ದು, ಪ್ರಮೋದ್ ಮರವಂತೆ ಮತ್ತು ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯ ರಚಿಸಿದ್ದಾರೆ. ಸಂದೀಪ್ ವೆಲ್ಲುರಿ ಈ ಸಿನಿಮಾದ ಛಾಯಾಗ್ರಾಹಕರು. ಆರ್. ಜೆ ಪ್ರದೀಪಾ ಅವರೇ ಬರೆದ ಕಥೆಗೆ ನಾಗರಾಜ ಸೋಮಯಾಜಿ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಇದೇ ನವೆಂಬರ್ 22ರಂದು ‘ಮರ್ಯಾದೆ ಪ್ರಶ್ನೆʼ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.