‘ದಾಸರಹಳ್ಳಿ’ಯಲ್ಲಿ ಆಡಿಯೋ ಮತ್ತು ಟ್ರೇಲರ್ ರಿಲೀಸ್

ಮಾಸ್ ಕಥಾಹಂದರದ ‘ದಾಸರಹಳ್ಳಿ’ ಚಿತ್ರದ ಟ್ರೇಲರ್ ಹೊರಬಂತು
ಆಕ್ಷನ್ ಲುಕ್ನಲ್ಲಿ ಧರ್ಮ ಕೀತಿರಾಜ್ ಮಿಂಚಿಂಗ್…
‘ದಾಸರಹಳ್ಳಿ’ಯಲ್ಲಿ ನಿಂತ ಕ್ಯಾಡ್ಬರಿ ಹುಡುಗ
ಪಿ. ಉಮೇಶ ನಿರ್ಮಾಣದ ಎಂ. ಆರ್. ಶ್ರೀನಿವಾಸ್ ನಿರ್ದೇಶನದ ‘ದಾಸರಹಳ್ಳಿ’ ಸಿನೆಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಇಲ್ಲಿಯವರೆಗೂ ಸ್ಯಾಂಡಲ್ವುಡ್ನಲ್ಲಿ ಲವ್ ಮಾತ್ತು ರೊಮ್ಯಾಂಟಿಕ್ ಕಥಾಹಂದರದ ಸಿನೆಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡು, ಕ್ಯಾಡ್ಬರಿ ಹುಡುಗ ಎಂದೇ ಕರೆಸಿಕೊಳ್ಳುತ್ತಿರುವ ಧರ್ಮ ಕೀತಿರಾಜ್ ಈ ಸಿನೆಮಾದಲ್ಲಿ ಮೊದಲ ಬಾರಿಗೆ ಔಟ್ ಅಂಡ್ ಔಟ್ ಮಾಸ್ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದ ‘ದಾಸರಹಳ್ಳಿ’ ಸಿನೆಮಾದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರರಂಗದ ಅನೇಕ ಗಣ್ಯರು ಮತ್ತು ‘ದಾಸರಹಳ್ಳಿ’ ಸಿನೆಮಾದ ಕಲಾವಿದರು, ತಂತ್ರಜ್ಞರು ಹಾಜರಿದ್ದರು.
ಆಕ್ಷನ್ ಲುಕ್, ಮಾಸ್ ಕಂಟೆಂಟ್…
ಇನ್ನು ಬಿಡುಗಡೆಯಾಗಿರುವ ‘ದಾಸರಹಳ್ಳಿ’ ಸಿನೆಮಾದ ಟ್ರೇಲರ್ ನಲ್ಲಿ ಪಕ್ಕಾ ಮಾಸ್ ಮತ್ತು ಆಕ್ಷನ್ ಎಲಿಮೆಂಟ್ಸ್ ಎದ್ದು ಕಾಣುತ್ತಿದೆ. ಅದರಲ್ಲೂ ಆಕ್ಷನ್ ಪ್ರಿಯರಿಗೆ ಕಿಕ್ಕೇರಿಸುವಂತ ಅಂಶಗಳು ಟ್ರೇಲರ್ ನಲ್ಲಿದೆ ಎಂಬುದು ಚಿತ್ರತಂಡದ ಮಾತು. ಧರ್ಮ ಕೀರ್ತಿರಾಜ್ ಮುಖ್ಯಭೂಮಿಕೆಯಲ್ಲಿರುವ ಸಿನೆಮಾ ಇದಾಗಿದ್ದು, ಚಾಕ್ಲೇಟ್ ಬಾಯ್ ದೊಣ್ಣೆ ಹಿಡಿದರೆ ಎದುರಿದ್ದವರ ಮೀಟರ್ ಆಫ್ ಆಗೋದು ಗ್ಯಾರಂಟಿ ಎಂಬುದು ಆಕ್ಷನ್ ಪ್ರಿಯರ ಮಾತು.
‘ದಾಸರಹಳ್ಳಿ’ಯಲ್ಲಿ ಸಾಮಾಜಿಕ ಸಂದೇಶವಿದೆಯಂತೆ..!
‘ದಾಸರಹಳ್ಳಿ’ ಸಿನೆಮಾದ ಟ್ರೇಲರ್ ಬಿಡುಗಡೆ ವೇಳೆ ಮಾತನಾಡಿದ ನಿರ್ದೇಶಕ ಎಂ. ಆರ್. ಶ್ರೀನಿವಾಸ್, ‘ತಾಯಿ ಸಪೋರ್ಟ್ ಇದ್ದರು ತಂದೆ ಸಪೋರ್ಟ್ ಇಲ್ಲದೆ ಹೋದರೆ ಮಕ್ಕಳು ಏನಾಗುತ್ತವೆ ಎಂಬ ಸ್ಪಷ್ಟ ಸಂದೇಶವನ್ನ ಇದರಲ್ಲಿ ಹೇಳಲಾಗಿದೆ. ಮಕ್ಕಳು ಫೀಸ್ ಕಟ್ಟುವುದಕ್ಕೂ ಆಗದೆ ಕಳ್ಳತನಕ್ಕೆ ಇಳಿಯುವುದು ಸೇರಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಆಗ ನಾಯಕ ನಟ ಆ ‘ದಾಸರಹಳ್ಳಿ’ಯನ್ನ ಹೇಗೆ ಮೆಟ್ರೋ ರೇಂಜಿಗೆ ತೆಗೆದುಕೊಂಡು ಹೋಗ್ತಾನೆ ಅನ್ನೋದು ಸಿನಿಮಾದಲ್ಲಿ ಅದ್ಭುತವಾಗಿ ತೋರಿಸಲಾಗಿದೆ. ತುಂಬಾ ಕಷ್ಟಪಟ್ಟು ಸಿನಿಮಾವನ್ನು ಮಾಡಿದ್ದೀವಿ. ದೊಡ್ಡ ಕಲಾವಿದರು ನಮ್ಮ ಸಿನಿಮಾದಲ್ಲಿದ್ದಾರೆ. ಥ್ರಿಲ್ಲರ್ ಮಂಜು ಸರ್, ಕೌರವ ವೆಂಕಟೇಶ್ ಸರ್ ನಟನೆ ಮಾಡಿ, ಕೆಲಸವನ್ನು ಮಾಡಿದ್ದಾರೆ. ಈ ಸಿನಿಮಾವನ್ನು ನೀವೆಲ್ಲಾ ಗೆಲ್ಲಿಸಬೇಕು. ನಮಗೆ ಬೆನ್ನೆಲುಬಾಗಿ ಉಮೇಶ್ ಸರ್ ಜೊತೆಗೆ ನಿಂತಿದ್ದಾರೆ’ ಎಂದಿದ್ದಾರೆ.
ಎಲ್ಲರಿಗೂ ಇಷ್ಟವಾಗುವಂಥ ಸಿನೆಮಾ; ಉಮೇಶ್ ಭರವಸೆ
ಹಿರಿಯ ನಟ ಉಮೇಶ್ ಮಾತನಾಡಿ, ‘ಈ ಸಿನಿಮಾ ತಂಡದವರು ಒಂದು ಹೆಮ್ಮೆಯ ಕೆಲಸ ಮಾಡಿದ್ದಾರೆ. ಅನ್ನ ಹಾಕೋನು ರೈತ.. ದೇಶ ಕಾಯೋನು ಯೋಧ. ಇವತ್ತು ಅವರನ್ನ ವೇದಿಕೆ ಮೇಲೆ ಕರೆಸಿರುವುದು ತುಂಬಾ ಖುಷಿ ಇದೆ. ಪಿ. ಉಮೇಶ್ ಅವರು ಹಾಗೂ ನಿರ್ದೇಶಕರ ಒಳ್ಳೆ ಸಿನಿಮಾ ಮಾಡಿದ್ದಾರೆ. ಕಷ್ಟ ಪಟ್ಟು ಎಲ್ಲಾ ಕಲಾವಿದರನ್ನು ಸೇರಿಸಿದ್ದಾರೆ. ನಮ್ಮ ಹಳೆಯ ಗೆಳೆಯರೆಲ್ಲಾ ಒಂದೇ ಸಿನಿಮಾದಲ್ಲಿ ಸಿಕ್ಕಿದ್ದಾರೆ. ಇವತ್ತು ನಿರ್ಮಾಪಕ, ನಿರ್ದೇಶಕ, ತಾಂತ್ರಿಕ ವರ್ಗ ಇದ್ದರೆ ಮಾತ್ರ ಒಬ್ಬ ಕಲಾವಿದ. ಅವರೆಲ್ಲಾ ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ನೀವೆಲ್ಲ ಥಿಯೇಟರ್ ಗೆ ಹೋಗಿ ನೋಡಿದರೆ ಖಂಡಿತ ಸಿನೆಮಾ ಇಷ್ಟವಾಗುತ್ತೆ’ ಎಂದರು.
ಫೆಬ್ರವರಿಯಲ್ಲಿ ತೆರೆಗೆ ಬರಲಿದೆಯಂತೆ ‘ದಾಸರಹಳ್ಳಿ’
ನಟ ಧರ್ಮ ಕೀರ್ತಿರಾಜ್ ಮಾತನಾಡಿ, ‘ಉಮೇಶ್ ಸರ್ ನಂಗೆ ಮೊದಲಿನಿಂದ ಪರಿಚಯವಿದ್ರು. ನಾನೊಂದು ಸಿನಿಮಾ ಮಾಡ್ತಾ ಇದ್ದೀನಿ ನೀವೂ ಅದರಲ್ಲಿ ಮುಖ್ಯ ಪಾತ್ರದಲ್ಲಿ ಇರಬೇಕು ಅಂದ್ರು. ನಾನು ಕೂಡ ಖುಷಿಯಿಂದ ಒಪ್ಪಿಕೊಂಡೆ. ಈ ಸಿನಿಮಾದಲ್ಲಿ ಒಂದೊಳ್ಳೆ ಮೆಸೇಜ್ ಇದೆ. ಕುಡಿತದಿಂದ ಏನಾಗುತ್ತೆ ಎಂಬುದೇ ಕಥೆ. ನಾಲ್ಕು ಕಥೆ ಬರುತ್ತೆ ಸಿನಿಮಾದಲ್ಲಿ. ಒಂದೊಂದು ನೋಡುಗರನ್ನು ಕಾಡುತ್ತದೆ. ಹಾಡುಗಳು ಮಾತ್ರ ತುಂಬಾ ಚೆನ್ನಾಗಿ ಬಂದಿದೆ. ಸಿನಿಮಾವನ್ನು ಫೆಬ್ರವರಿ ರಿಲೀಸ್ ಗೆ ಪ್ಲ್ಯಾನ್ ಮಾಡ್ತಾ ಇದಾರೆ. ಎಲ್ಲರು ಸಿನಿಮಾವನ್ನು ಥಿಯೇಟರ್ ನಲ್ಲಿಯೇ ನೋಡಿ’ ಎಂದು ನೆರದಿದ್ದವರನ್ನು ಕೋರಿಕೊಂಡರು.
ಕುತೂಹಲಭರಿತ ಸಿನೆಮಾವನ್ನು ಮಿಸ್ ಮಾಡದೇ ನೋಡಿ…
ನಟಿ ನೇಹಾ ಮಾತನಾಡಿ, ‘ನಾನು ಹೊಸ ಹುಡುಗಿ ಆಗಿದ್ರು ಕೂಡ ತುಂಬಾ ಸಪೋರ್ಟಿವ್ ಆಗಿದ್ರು. ‘ದಾಸರಹಳ್ಳಿ’ ಎಂದಾಕ್ಷಣ ಒಂದು ಕ್ಯೂರಿಯಾಸಿಟಿ ಇದೆ. ಯಾಕಂದ್ರೆ ಅದೊಂದು ಏರಿಯಾ ಇರುವ ಕಾರಣ ಎಲ್ಲರಿಗೂ ಕುತೂಹಲ. ನನಗೂ ಈ ಕುತೂಹಲ ಇದೆ. ಈ ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದಕ್ಕೆ ಥ್ಯಾಂಕ್ಯೂ. ಮಿಸ್ ಮಾಡದೆ ಸಿನಿಮಾ ನೋಡಿ’ ಎಂದಿದ್ದಾರೆ.
‘ದಾಸರಹಳ್ಳಿ’ಯಲ್ಲಿ ಬೃಹತ್ ಕಲಾವಿದರ ತಾರಾಗಣ…
‘ವೈಷ್ಣವಿ ವಸುಂಧರೆ ಕ್ರಿಯೇಷನ್ಸ್’ ಬ್ಯಾನರ್ ನಡಿ ಪಿ. ಉಮೇಶ ಅವರು ‘ದಾಸರಹಳ್ಳಿ’ ಸಿನೆಮಾವನ್ನು ನಿರ್ಮಾಣ ಮಾಡಿದ್ದಾರೆ. ಧರ್ಮ ಕೀರ್ತಿರಾಜ್, ನೇಹಾ,ಉಮೇಶ್ ರಾಜ್, ಥ್ರಿಲ್ಲರ್ ಮಂಜು, ಕೌರವ ವೆಂಕಟೇಶ್, ಜಾಗ್ವಾರ್ ಸಣ್ಣಪ್ಪ, ಎಂ. ಎಸ್. ಉಮೇಶ, ಹೊನ್ನವಳ್ಳಿ ಕೃಷ್ಣ, ಬಿರಾದರ್, ಬೆಂಗಳೂರು ನಾಗೇಶ್, ಶಿವಕುಮಾರ್ ಆರಾಧ್ಯ, ಮಿಮಿಕ್ರಿ ಗೋಪಿ, ‘ಮಜಾ ಟಾಕೀಸ್’ ಪವನ್, ಪದ್ಮಾವಸಂತಿ, ರೇಖಾ ದಾಸ್, ಸಿತಾರ, ಕವನ, ಮೈಸೂರು ಮಂಜುಳಾ, ಪ್ರೇಮ ಗೌಡ , ವಿಕ್ಟರಿ ವಾಸು, ಕಿಲ್ಲರ್ ವೆಂಕಟೇಶ್, ಅರಸಿಕೆರೆ ರಾಜು ಸೇರಿದಂತೆ 150ಕ್ಕೂ ಹೆಚ್ಚು ಹಿರಿಯ ಕಲಾವಿದರು ಇದ್ದಾರೆ.
ಉಳಿದಂತೆ ‘ದಾಸರಹಳ್ಳಿ’ ಸಿನೆಮಾಕ್ಕೆ ಎಂ. ಎಸ್. ತ್ಯಾಗರಾಜ್ ಸಂಗೀತ ಸಂಯೋಜಿಸಿದ್ದು, ಸಿ. ನಾರಾಯಣ್ ಮತ್ತು ಬಾಲು ಛಾಯಾಗ್ರಹಣ ಕಾರ್ಯ ನಿರ್ವಹಿಸಿದ್ದಾರೆ. ಸಿನೆಮಾಕ್ಕೆ ಆರ್. ಡಿ. ರವಿ (ದೊರೆರಾಜ್) ಸಂಕಲನ, ಥ್ರಿಲ್ಲರ್ ಮಂಜು, ಕೌರವ ವೆಂಕಟೇಶ್, ಜಾಗ್ವಾರ್ ಸಣ್ಣಪ್ಪ ಸಾಹಸ ಸಂಯೋಜನೆಯಿದೆ. ‘ದಾಸರಹಳ್ಳಿ’ ಸಿನೆಮಾಕ್ಕೆ ಶಿವರಾಜ್ ಚಿತ್ರಕಥೆ, ಸಂಭಾಷಣೆ ಬರೆದಿದ್ದು, ಸಾಯಿ ಕೃಷ್ಣ ಹೆಬ್ಬಾಳ, ಶರಣ್ ಗದ್ವಾಲ್ ಅವರದ್ದು ತಾಂತ್ರಿಕ ನಿರ್ದೇಶನವಿದೆ. ಗಹನ್ ನಾಯಕ್ ಸಹ ನಿರ್ದೇಶನ ಮಾಡಿದ್ದಾರೆ. ಒಟ್ಟಾರೆ ಸದ್ಯ ಆಡಿಯೋ ಮತ್ತು ಟ್ರೇಲರ್ ಮೂಲಕ ಒಂದಷ್ಟು ಸದ್ದು ಮಾಡುತ್ತಿರುವ ‘ದಾಸರಹಳ್ಳಿ’ ಸಿನೆಮಾವನ್ನು ಮುಂದಿನ ವರ್ಷ ಅಂದ್ರೆ 2025ರ ಫೆಬ್ರವರಿಯಲ್ಲಿ ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.