ಚಂದನವನಕ್ಕೆ 90 ವರ್ಷ; ‘ಚಂದನವನದ ಚಿಲುಮೆಗಳು’ ಕೃತಿ ಲೋಕಾರ್ಪಣೆ

ಕನ್ನಡ ಚಿತ್ರರಂಗಕ್ಕೆ 90 ವರ್ಷ ಪೂರ್ಣಗೊಂಡ ಹಿನ್ನೆಯಲ್ಲಿ ಅರ್ಥಪೂರ್ಣ ಕಾರ್ಯಕ್ರಮ
90 ಮಹತ್ವದ ಚಿತ್ರಗಳ ಕುರಿತಾದ ‘ಚಂದನವನದ ಚಿಲುಮೆಗಳು’ ಪುಸ್ತಕ ಬಿಡುಗಡೆ
ಕನ್ನಡ ಚಿತ್ರರಂಗದ ಹಿರಿಯ ಗಣ್ಯರಿಂದ ಕೃತಿ ಲೋಕಾರ್ಪಣೆ
ಕನ್ನಡ ಚಿತ್ರರಂಗಕ್ಕೆ 90 ವರ್ಷಗಳು ಪೂರೈಸಿರುವ ವಿಷಯ ಅನೇಕರಿಗೆ ಗೊತ್ತಿರಬಹುದು. ಇದನ್ನೆ ಹಿನ್ನೆಲೆಯಾಗಿಟ್ಟುಕೊಂಡು ಈಗ ಕನ್ನಡ ಚಿತ್ರರಂಗದ ಇಕ್ಕು-ದೆಸೆಯನ್ನು ಬದಲಿಸಿದ 90 ಪ್ರಮುಖ ಚಿತ್ರಗಳ ಕುರಿತಾದ ಮಾಹಿತಿಯನ್ನು ದಾಖಲಿಸಿರುವ ‘ಚಂದನವನದ ಚಿಲುಮೆಗಳು’ ಎಂಬ ಹೆಸರಿನ ಕೃತಿ ಇದೀಗ ಬಿಡುಗಡೆಯಾಗಿದೆ.
‘ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ’ ಹೊರ ತಂದಿರುವ ‘ಚಂದನವನದ ಚಿಲುಮೆಗಳು’ ಪುಸ್ತಕವು ದ್ವಿಭಾಷೆಯಲ್ಲಿ ಪ್ರಕಟವಾಗಿದ್ದು, ಡಿ. 15 ರ ಭಾನುವಾರ ಬೆಂಗಳೂರಿನ ಜಿ. ಟಿ. ವರ್ಲ್ಡ್ ಮಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ, ‘ರಾಷ್ಟ್ರ ಪ್ರಶಸ್ತಿ’ ವಿಜೇತ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಟಿ. ಎಸ್. ನಾಗಾಭರಣ, ನಟ ಶ್ರೀಮುರುಳಿ ಮತ್ತು ‘ಕರ್ನಾಟಕ ಮಾಧ್ಯಮ ಅಕಾಡೆಮಿ’ ಅಧ್ಯಕ್ಷೆ ಆಯೇಷಾ ಖಾನಂ ಈ ಕೃತಿಯನ್ನು ಲೋಕಾರ್ಪಣೆ ಮಾಡಿ ಶುಭ ಹಾರೈಸಿದರು.
ಎಸ್. ಶ್ಯಾಮ್ಪ್ರಸಾದ್, ಡಾ. ಶರಣು ಹುಲ್ಲೂರು ಜಂಟಿ ಸಹಭಾಗಿತ್ವದಲ್ಲಿ ಹೊರಬಂದ ಕೃತಿ
ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಚಲನಚಿತ್ರ ಪತ್ರಕರ್ತರಾಗಿ ಕೆಲಸ ಮಾಡುತ್ತಿರುವ, ಕನ್ನಡ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿರುವುದರ ಜೊತೆಗೆ, ಈಗಾಗಲೇ ಚಿತ್ರರಂಗಕ್ಕೆ ಸಂಬಂಧಿಸಿದ ಹಲವು ಕೃತಿಗಳನ್ನು ರಚಿಸಿ ಸೈ ಎನಿಸಿಕೊಂಡಿರುವ ಎಸ್. ಶ್ಯಾಮ್ಪ್ರಸಾದ್ ಮತ್ತು ಡಾ. ಶರಣು ಹುಲ್ಲೂರು ಜಂಟಿ ಸಹಭಾಗಿತ್ವದಲ್ಲಿ ಈ ಕೃತಿ ರಚನೆಯಾಗಿದೆ. ಕನ್ನಡದಲ್ಲಿ ‘ಚಂದನವನದ ಚಿಲುಮೆಗಳು’ ಎಂಬ ಹೆಸರಿನಲ್ಲಿ ಮತ್ತು ಇಂಗ್ಲೀಷ್ನಲ್ಲಿ ‘Landmarks of Sandalwood’ ಎಂಬ ಹೆಸರಿನಲ್ಲಿಕಾಫಿಟೇಬಲ್ ಶೈಲಿಯಲ್ಲಿ ಈ ಪುಸ್ತಕ ಮೂಡಿಬಂದಿದೆ.
‘ಚಂದನವನದ ಚಿಲುಮೆಗಳು’ ಕೃತಿಗೆ ಸಿನಿಗಣ್ಯರ ಮೆಚ್ಚುಗೆ
‘ಚಂದನವನದ ಚಿಲುಮೆಗಳು’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಹಂಸಲೇಖ, ‘ಪತ್ರಕರ್ತರು ಹಾಗೂ ಲೇಖಕರೂ ಆಗಿರುವ ಡಾ. ಶರಣು ಹುಲ್ಲೂರು ಮತ್ತು ಎಸ್. ಶ್ಯಾಮ್ ಪ್ರಸಾದ್ ಜೊತೆಯಾಗಿ ಆರೇಳು ತಿಂಗಳ ಕಾಲ ಈ ಪುಸ್ತಕ ಹೊರತರಲು ಶ್ರಮಿಸಿದ್ದಾರೆ. ಇಂತಹ ದಾಖಲೆಗಳು ಹೆಚ್ಚಾಗಲಿ’ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ‘ಪುಸ್ತಕ ರೂಪದಲ್ಲಿ ಸಿನೆಮಾ ಕುರಿತಾದ ವಿಷಯಗಳು ಕನ್ನಡದಲ್ಲಿ ಹೆಚ್ಚಾಗಲಿʼ ಎಂದು ಹೇಳಿದರೆ, ‘ಸಿನೆಮಾ ಪಠ್ಯಗಳ ಅವಶ್ಯಕತೆ ಹಿಂದೆಂದಿಗಿಂತಲೂ ಇಂದಿನ ದಿನಗಳಲ್ಲಿ ಹೆಚ್ಚಿದೆ’ ಎಂದು ಮತ್ತೊಬ್ಬ ಹಿರಿಯ ನಿರ್ದೇಶಕ ಟಿ.ಎಸ್. ನಾಗಾಭರಣ ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ ನಟ ಶ್ರೀಮುರಳಿ, ಚಲನಚಿತ್ರ ಪತ್ರಕರ್ತರ ಮತ್ತು ಸಿನೆಮಾ ರಂಗದ ನಂಟಿನ ಕುರಿತಾಗಿ ಮಾತನಾಡಿ, ‘ಗಾನಯೋಗಿ ಪಂಚಾಕ್ಷರಿ ಗವಾಯಿ’ ಚಿತ್ರದ ಗೀತೆಯೊಂದನ್ನು ಹಾಡಿ ರಂಜಿಸಿದರು. ಈ ಕಾರ್ಯಕ್ರಮದಲ್ಲಿ, ಚಿತ್ರರಂಗದ ಹಲವು ನಟ-ನಟಿಯರು, ತಂತ್ರಜ್ಞರು, ಪತ್ರಕರ್ತರು ಮತ್ತು ಸಾಹಿತ್ಯಾಸಕ್ತರು ಭಾಗವಹಿಸಿ ಕೃತಿಯ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರು.
‘ಚಂದನವನದ ಚಿಲುಮೆಗಳು’ ಕೃತಿಯಲ್ಲಿ ಏನಿದೆ..?
ಇನ್ನು ‘ಚಂದನವನದ ಚಿಲುಮೆಗಳು’ ಪುಸ್ತಕದಲ್ಲಿ 1934ರಲ್ಲಿ ತಯಾರಾದ ‘ಸತಿ ಸುಲೋಚನಾ’ ಮತ್ತು ‘ಭಕ್ತ ಧ್ರುವ’ ಚಿತ್ರಗಳಿಂದ ಪ್ರಾರಂಭಿಸಿ, 2022ರಲ್ಲಿ ಬಿಡುಗಡೆಯಾದ ‘ಕೆಜಿಎಫ್ 2’ ಚಿತ್ರಗಳವರೆಗೂ 90 ಚಿತ್ರಗಳ ಅಪರೂಪದ ಮಾಹಿತಿ ಮತ್ತು ಫೋಟೋಗಳ ಅಪರೂಪದ ಸಂಗ್ರಹ ಈ ಕೃತಿಯಲ್ಲಿದೆ. ಈ ಪುಸ್ತಕದಲ್ಲಿದೆ. ಬರೀ ಮಾಹಿತಿಯಷ್ಟೇ ಅಲ್ಲ, ಆ ಚಿತ್ರಗಳ ಮಹತ್ವ ಮತ್ತು ಕನ್ನಡ ಚಿತ್ರರಂಗಕ್ಕೆ ಆ ಚಿತ್ರಗಳು ಕೊಟ್ಟ ಕೊಡುಗೆ ಮತ್ತು ತಿರುವುಗಳನ್ನು ಈ ಪುಸ್ತಕದಲ್ಲಿ ಕಟ್ಟಿಕೊಡಲಾಗಿದೆ. ಕನ್ನಡ ಚಿತ್ರರಂಗದ ಕುರಿತು ದ್ವಿಭಾಷೆಯಲ್ಲಿ ಬಂದ ಕನ್ನಡದ ಮೊದಲ ಕಾಫಿ ಟೇಬಲ್ ಪುಸ್ತಕ ಎಂಬ ಹೆಗ್ಗಳಿಕೆಗೂ ‘ಚಂದನವನದ ಚಿಲುಮೆಗಳು’ ಮತ್ತು ‘Landmarks of Sandalwood’ ಪುಸ್ತಕ ಪಾತ್ರವಾಗಿದೆ.