ಶಿವಣ್ಣನಿಗೆ ಆಕ್ಷನ್-ಕಟ್ ಹೇಳಲು ಪವನ್ ಒಡೆಯರ್ ರೆಡಿ

ಶಿವರಾಜಕುಮಾರ್ ಹೊಸ ಸಿನಿಮಾಕ್ಕೆ ‘ಗೂಗ್ಲಿ’ ಡೈರೆಕ್ಟರ್ ಸಾರಥಿ
‘ಮಾಸ್ ಲೀಡರ್’ ಜೊತೆ ಪವನ್ ಒಡೆಯರ್ ಹೊಸ ಸಿನಿಮಾ ಘೋಷಣೆ
ಆಕ್ಷನ್-ಥ್ರಿಲ್ಲರ್ ಸಿನಿಮಾಕ್ಕೆ ಕೈ ಜೋಡಿಸಿದ ಪವನ್ ಒಡೆಯರ್
ಇತ್ತೀಚೆಗಷ್ಟೇ ‘ಭೈರತಿ ರಣಗಲ್’ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ನಟ ಹ್ಯಾಟ್ರಿಕ್ ಹೀರೋ ಶಿವರಾಜ ಕುಮಾರ್, ಈ ವರ್ಷ ಚಿತ್ರರಂಗಕ್ಕೆ ತಮ್ಮ ಪಾಲಿನ ಬ್ಲಾಕ್ ಬಸ್ಟರ್ ಹಿಟ್ ಸಿನೆಮಾ ಕೊಟ್ಟಿದ್ದರು. ಸದ್ಯ ‘ಭೈರತಿ ರಣಗಲ್’ ಸಿನೆಮಾದ ಸಕ್ಸಸ್ ಖುಷಿಯಲ್ಲಿರುವ ಶಿವರಾಜ ಕುಮಾರ್ ಹೊಸ ಸಿನೆಮಾ ಒಪ್ಪಿಕೊಂಡಿದ್ದಾರೆ. ಈಗಾಗಲೇ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ‘ಸೆಂಚುರಿ ಸ್ಟಾರ್’ ಶಿವರಾಜ್ಕುಮಾರ್ ಸದ್ಯ ಸ್ಯಾಂಡಲ್ವುಡ್ನ ಯಶಸ್ವಿ ನಿರ್ದೇಶಕರಾದ ಪವನ್ ಒಡೆಯರ್ ಜೊತೆ ಕೈ ಜೋಡಿಸಿದ್ದಾರೆ.
ಶಿವಣ್ಣ ಸಿನೆಮಾದ ನಿರ್ಮಾಣ, ನಿರ್ದೇಶನದ ಹೊಣೆ ಪವನ್ ಹೆಗಲಿಗೆ
ಕನ್ನಡ ಚಿತ್ರರಂಗದಲ್ಲಿ ಪವನ್ ಒಡೆಯರ್ ಕೇವಲ ನಿರ್ದೇಶಕರಾಗಿ ಮಾತ್ರವಲ್ಲದೆ ನಿರ್ಮಾಪಕರಾಗಿಯೂ ಹೆಸರು ಮಾಡಿದ್ದಾರೆ. ‘ಡೊಳ್ಳು’ ಚಿತ್ರ ನಿರ್ಮಾಣ ಮಾಡುವ ಮೂಲಕ ನಿರ್ಮಾಪಕರಾಗಿ ಸಿನಿರಂಗದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದ ಅವರು ಮೊದಲ ಚಿತ್ರ ನಿರ್ಮಾಣದಲ್ಲಿಯೇ ‘ರಾಷ್ಟ್ರ ಪ್ರಶಸ್ತಿ’ ಪಡೆದುಕೊಂಡಿದ್ದಾರೆ. ‘ಅವಸ್ತಿ v/s ಅವಸ್ತಿ’ ಎಂಬ ಬಾಲಿವುಡ್ ಚಿತ್ರ ನಿರ್ಮಿಸಿರುವ ಪವನ್ ಒಡೆಯರ್ ಸದ್ಯ ‘ವೆಂಕ್ಯಾ’ ಚಿತ್ರ ನಿರ್ಮಾಣದಲ್ಲಿ ತೊಡಗಿಸಿದ್ದಾರೆ. ಈಗ ಪವನ್ ಒಡೆಯರ್ ತಮ್ಮ ‘ಒಡೆಯರ್ ಮೂವೀಸ್’ ಬ್ಯಾನರ್ ನಡಿ ನಾಲ್ಕನೇ ಚಿತ್ರ ನಿರ್ಮಿಸುತ್ತಿದ್ದಾರೆ. ಅದು ಶಿವಣ್ಣನಿಗೆ ಎನ್ನುವುದೇ ವಿಶೇಷ.
ಮುಂದಿನ ವರ್ಷ ಶಿವಣ್ಣ-ಪವನ್ ಜೊತೆಯಾಟದ ಚಿತ್ರ
2025ಕ್ಕೆ ಶಿವಣ್ಣ ಹಾಗೂ ಪವನ್ ಕಾಂಬೋದ ಹೊಸ ಚಿತ್ರ ಟೇಕಾಫ್ ಆಗಲಿದೆ. ಕರುನಾಡ ಕಿಂಗ್ ಗೆ ಆಕ್ಷನ್-ಕಟ್ ಹೇಳುತ್ತಿರುವ ಸಂತಸ ಹಂಚಿಕೊಂಡಿರುವ ಪವನ್ ಒಡೆಯರ್, ‘ಕನ್ನಡದಲ್ಲಿ ಪ್ರತಿಯೊಬ್ಬ ನಿರ್ದೇಶಕರಿಗೂ ಶಿವಣ್ಣನಿಗೆ ಚಿತ್ರ ಮಾಡಬೇಕೆಂಬ ಕನಸು ಇರುತ್ತದೆ. ನನಗೂ ಅಂಥದ್ದೇ ಒಂದು ಕನಸಿತ್ತು. ನನ್ನ ಈ ಕನಸು ಈಗ ನನಸಾಗುತ್ತದೆ. ಥ್ರಿಲ್ಲರ್ ಜೊತೆಗೆ ಔಟ್ ಅಂಡ್ ಔಟ್ ಕಮರ್ಷಿಯಲ್ ಎಂಟರ್ ಟೈನರ್ ಚಿತ್ರ ನಿರ್ದೇಶನ ಮಾಡುತ್ತಿದ್ದು, ಹೆಚ್ಚಿನ ಮಾಹಿತಿಯನ್ನು ಸದ್ಯ ರಿವೀಲ್ ಮಾಡಲು ಆಗುತ್ತಿಲ್ಲ. ಆದರೆ ಈ ಹಿಂದಿನ ಸಿನೆಮಾಗಳಿಗಿಂತ ಈ ಚಿತ್ರದಲ್ಲಿ ಶಿವಣ್ಣ ವಿಭಿನ್ನವಾಗಿ ಕಾಣಲಿದ್ದಾರೆ’ ಎಂದಿದ್ದಾರೆ.
‘ಒಡೆಯರ್ ಮೂವೀಸ್’ ಬ್ಯಾನರ್ ನಡಿ ಅಪೇಕ್ಷಾ ಪವನ್ ಒಡೆಯರ್ ಹಾಗೂ ಪವನ್ ಒಡೆಯರ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅರ್ನಾ ಕ್ರಿಯೇಟಿವ್ ನಿರ್ಮಾಣದಲ್ಲಿ ಸಾಥ್ ಕೊಡಲಿದ್ದಾರೆ. ಮೂಲಗಳ ಪ್ರಕಾರ 2026ರ ಮಧ್ಯ ಭಾಗದಲ್ಲಿ ಶಿವರಾಜಕುಮಾರ್ ಮತ್ತು ಪವನ್ ಒಡೆಯರ್ ಕಾಂಬಿನೇಶನ್ನ ಈ ಹೊಸ ತೆರೆಗೆ ಬರುವ ಸಾಧ್ಯತೆಯಿದೆ.