Street Beat

ಚಿತ್ರೀಕರಣ ಮುಗಿಸಿದ ‘ಚೌಕಿದಾರ್’

ಪೃಥ್ವಿ-ಧನ್ಯಾ ‘ಚೌಕಿದಾರ್’ ಸಿನೆಮಾದ ಶೂಟಿಂಗ್ ಮುಕ್ತಾಯ

‘ರಥಾವರ’ ನಿರ್ದೇಶಕರ ‘ಚೌಕಿದಾರ್’ಗೆ ಕುಂಬಳಕಾಯಿ ಪ್ರಾಪ್ತಿ….

ಶೂಟಿಂಗ್‌ ಮುಗಿಸಿ ಪೋಸ್ಟ್‌ ಪ್ರೊಡಕ್ಷನ್‌ನತ್ತ ‘ಚೌಕಿದಾರ್’ 

‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್ ಹಾಗೂ ಧನ್ಯಾ ರಾಮಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ‘ಚೌಕಿದಾರ್’ ಸಿನೆಮಾದ ಚಿತ್ರೀಕರಣ ಸದ್ದಿಲ್ಲದೆ ಮುಕ್ತಾಯಗೊಂಡಿದೆ. ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ‘ಚೌಕಿದಾರ್’  ಸಿನೆಮಾದ ಮುಹೂರ್ತವನ್ನು ನಡೆಸಿ ಚಿತ್ರೀಕರಣ ಶುರು ಮಾಡಿದ್ದ ಚಿತ್ರತಂಡ, ಇತ್ತೀಚೆಗೆ ಅದೇ ದೇವಸ್ಥಾನದಲ್ಲಿ ಕುಂಬಳಕಾಯಿ ಹೊಡೆಯುವ ಮೂಲಕ ‘ಚೌಕಿದಾರ್’ ಸಿನೆಮಾದ ಚಿತ್ರೀಕರಣಕ್ಕೆ ತೆರೆ ಎಳೆದಿದೆ.

‘ಚೌಕಿದಾರ್’ನ ಜೊತೆಗಿನ ಚಿತ್ರೀಕರಣ ಅನುಭವ ಹಂಚಿಕೊಂಡ ಚಿತ್ರತಂಡ

‘ಚೌಕಿದಾರ್’ ಸಿನೆಮಾದ ಕೊನೆ ದಿನದ ಚಿತ್ರೀಕರಣ ವೇಳೆ ಹಾಜರಿದ್ದ ಚಿತ್ರತಂಡದ ಪ್ರಮುಖ ಕಲಾವಿದರು ಮತ್ತು ತಂತ್ರಜ್ಞರು ‘ಚೌಕಿದಾರ್’ ಜೊತೆಗಿನ ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು

ಮೊದಲಿಗೆ ‘ಚೌಕಿದಾರ್’ನ ಬಗ್ಗೆ ಮಾತನಾಡಿದ ನಾಯಕ ನಟ ಪೃಥ್ವಿ ಅಂಬಾರ್, ‘ಈ ಚಿತ್ರದಿಂದ ಬಹಳಷ್ಟು ಕಲಿಯಲು ಸಿಕ್ಕಿದೆ. ನುರಿತ ನಿರ್ದೇಶಕರು ಇದ್ದಾಗ ಹೇಗೆ ಸಿನೆಮಾ ಮಾಡಬೇಕು, ಯಾವ ರೀತಿ ಅಭಿನಯಿಸಬೇಕು ಅನ್ನೋದನ್ನು ಅವರು ಹೇಳಿಕೊಟ್ಟಿದ್ದಾರೆ. ಮನುಷ್ಯನ ಭಾವನೆಗಳನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಈ ಸಿನೆಮಾದಲ್ಲಿ ಫ್ಯಾಮಿಲಿ ಎಮೋಷನ್ ಅಂಶಗಳನ್ನು ತುಂಬಾ ಚೆನ್ನಾಗಿ ಅಳವಡಿಸಿದ್ದಾರೆ. ಸಾಯಿಕುಮಾರ್‌ ಅವರಂಥ ಹಿರಿಯ ನಟರು ಸೆಟ್ ನಲ್ಲಿ ಇದ್ದ ರೀತಿ. ನಮ್ಮಂತಹ ಕಲಾವಿದರಿಗೆ ಪುಸ್ತಕ ಇದ್ದಂತೆ’ ಎಂದು ತಿಳಿಸಿದರು.

ಬಹುಭಾಷೆಗಳಲ್ಲಿ ಬರಲಿದ್ದಾನಂತೆ ‘ಚೌಕಿದಾರ್’..! 

ನಿರ್ದೇಶಕ‌ ಚಂದ್ರಶೇಖರ್ ಬಂಡಿಯಪ್ಪ ಮಾತನಾಡಿ, ‘ನಾವು ನಿರ್ದೇಶಕರಾಗಿ ನಿರ್ಮಾಪಕರ ನಂಬಿಕೆ ಉಳಿಸಿಕೊಳ್ಳಬೇಕು. ನಿರ್ಮಾಪಕರಿಗೆ ಪ್ರೊಫೆಷನಲಿಸಂ ಇದೆ. ಇಡೀ ಕಲಾವಿದರು ಅತ್ಯದ್ಭುತವಾಗಿ ಅಭಿನಯಿಸಿದ್ದಾರೆ. ಮುಂದಿನ ಮೇ ತಿಂಗಳ ಹೊತ್ತಿಗೆ ಸಿನೆಮಾ ರಿಲೀಸ್ ಮಾಡಲು ಪ್ಲ್ಯಾನ್ ಮಾಡುತ್ತಿದ್ದೇವೆ. ಸಂಕ್ರಾಂತಿಗೆ ಟೀಸರ್ ರಿಲೀಸ್ ಮಾಡುತ್ತೇವೆ. ನಾಲ್ಕು ಹಾಡುಗಳಿವೆ. ಪ್ರತಿಯೊಬ್ಬ ಮನೆಯಲ್ಲಿಯೂ ‘ಚೌಕಿದಾರ್’ ಇರುತ್ತಾರೆ ಅವರ ಕಥೆಯನ್ನು ನಾವು ಹೇಳಿದ್ದೇವೆ. ಗ್ರಾಮಾಂತರ ಪ್ರದೇಶದಿಂದಲೇ ಚಿತ್ರ ಶುರುವಾಗುತ್ತದೆ. ಸಾಯಿಕುಮಾರ್ ಹಾಗೂ ಪೃಥ್ವಿ ತಂದೆ ಮಗನಾಗಿ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಚಿತ್ರ ಏಕಕಾಲದಲ್ಲಿ ಬಿಡುಗಡೆಯಾಗಲಿದೆ’ ಎಂದು ತಿಳಿಸಿದರು.

ನಾಯಕಿ ಧನ್ಯಾ ರಾಮಕುಮಾರ್ ಮಾತನಾಡಿ, ”ಚೌಕಿದಾರ್’ ಶೂಟಿಂಗ್ ಮುಗಿದಿದೆ. ಈ ಚಿತ್ರದಲ್ಲಿ ಪಾತ್ರ ಸಿಕ್ಕಿರುವುದು ಖುಷಿ ಜೊತೆಗೆ ಹೆಮ್ಮೆ ಇದೆ. ಈ ಸಿನೆಮಾದಿಂದ ನನಗೆ ಕಲಿಯುವುದು ತುಂಬಾನೇ ಸಿಕ್ತು. ಜರ್ನಿ ಚಾಲೆಂಜಿಂಗ್ ಆಗಿತ್ತು. ಈ ಚಿತ್ರದ ಮೂಲಕ ಒಳ್ಳೆ ನಟಿಯಾಗಿ ಬಂದಿದ್ದೇನೆ ಎನಿಸಿತು. ಹಿರಿಯ ಕಲಾವಿದರ ಜೊತೆ ಕೆಲಸ ಮಾಡಿರುವುದು ಖುಷಿಯಾಗಿದೆ. ಕನ್ನಡದ ಪ್ರೇಕ್ಷಕರಿಗೆ ಈ ಸಿನೆಮಾ ಇಷ್ಟವಾಗಲಿದೆ’ ಎಂದರು.

ಹೊಸವರ್ಷ ಕನ್ನಡಕ್ಕೆ ಹ್ಯಾಟ್ರಿಕ್‌ ಆಗಲಿದೆ!

ಹಿರಿಯ ನಟ ಸಾಯಿಕುಮಾರ್ ಮಾತನಾಡಿ, ‘ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ಇದೇ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನಡೆದಿದ್ದು, ಕುಂಬಳಕಾಯಿ ಕೂಡ ಇಲ್ಲೇ ಹೊಡೆಯಲಾಗಿದೆ. ಯಾವ ಸಿನೆಮಾಗೂ ಇದು ಆಗಿಲ್ಲ. ಮಹಾನ್ ಕಾಳಿ ಆಶೀರ್ವಾದ ನಮ್ಮ‌ ಚಿತ್ರಕ್ಕಿದೆ ಅನ್ನುವುದು ಗೊತ್ತಾಗುತ್ತಿದೆ. ‘ಚೌಕಿದಾರ್’ ಸಿನೆಮಾದಲ್ಲಿ ಒಂದೊಳ್ಳೆ ಕಲಾವಿದರು ಹಾಗೂ ತಂತ್ರಜ್ಞಾನರ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ಎಲ್ಲಾ ಕಲಾವಿದರು ಅದ್ಭುತವಾಗಿ ನಟಿಸಿದ್ದಾರೆ. ಇದೊಂದು ಫ್ಯಾಮಿಲಿ ಡ್ರಾಮಾ, ಎಮೋಷನಲ್ ಡ್ರಾಮಾ. ತೆಲುಗಿನಲ್ಲಿ ಹ್ಯಾಟ್ರಿಕ್ ಕೊಟ್ಟೆ. ‘ಸರಿಪೋದ ಶನಿವಾರ’, ‘ಲಕ್ಕಿ ಭಾಸ್ಕರ್’ ನೂರು ಕೋಟಿ ಕೊಟ್ಟಿವೆ. ಮುಂದಿನ ವರ್ಷ ಕನ್ನಡದಲ್ಲಿ ಹ್ಯಾಟ್ರಿಕ್ ಆಗಲಿ’ ಎಂದು ಭರವಸೆಯ ಮಾತುಗಳನ್ನಾಡಿದರು.

ಈ ಹಿಂದೆ ನಟ ಶ್ರೀಮುರಳಿ ಅಭಿನಯದ ‘ರಥಾವರ’ ಸಿನೆಮಾ ನಿರ್ದೇಶಿಸಿದ್ದ ಚಂದ್ರಶೇಖರ್ ಬಂಡಿಯಪ್ಪ ಈ ಬಾರಿ ‘ಚೌಕಿದಾರ್’ ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದು, ಕಲ್ಲಹಳ್ಳಿ ಚಂದ್ರಶೇಖರ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ‘ಚೌಕಿದಾರ್’ ಸಿನೆಮಾಕ್ಕೆ ಸಚಿನ್‌ ಬಸ್ರೂರು ಸಂಗೀತ ಸಂಯೋಜಿಸಿದ್ದು, ವಿ. ನಾಗೇಂದ್ರ ಪ್ರಸಾದ್‌, ಪ್ರಮೋದ್‌ ಮರವಂತೆ, ಸಂತೋಷ್ ನಾಯಕ್ ಸಾಹಿತ್ಯ ಬರೆದಿದ್ದಾರೆ. ಸಿದ್ದು ಕಂಚನಹಳ್ಳಿ ಛಾಯಾಗ್ರಹಣ, ರವಿ ವರ್ಮಾ ಸಾಹಸ ನಿರ್ದೇಶನ ಸಿನಿಮಾಗಿದೆ. ‘ಚೌಕಿದಾರ್’ ಬಹುಭಾಷೆಯಲ್ಲಿ ಮೂಡಿ ಬರುತ್ತಿದ್ದು, ಲವರ್‌ ಬಾಯ್‌ ಆಗಿದ್ದ ಪೃಥ್ವಿ ಅಂಬಾರ್ ಮಾಸ್ ಲುಕ್ ಕೊಡಲಿದ್ದಾರೆ.

Related Posts

error: Content is protected !!