Pop Corner

‘ಎದ್ದೇಳು ಮಂಜುನಾಥ್-2’ ಬಿಡುಗಡೆಗೆ ರೆಡಿ

ಗುರುಪ್ರಸಾದ್ ಕೊನೆಯ ಚಿತ್ರ ಬಿಡುಗಡೆಗೆ ಸಿದ್ಧ.‌.

‘ಎದ್ದೇಳು ಮಂಜುನಾಥ್-2’ ಚಿತ್ರದ ಕಿತ್ತೋದ ಪ್ರೇಮ ಹಾಡುರಿಲೀಸ್

ಗುರುಪ್ರಸಾದ್ ಇಲ್ಲದ ‘ಎದ್ದೇಳು ಮಂಜುನಾಥ-2’ ತೆರೆಗೆ ತರಲು ಕಸರತ್ತು

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ದಿ. ಮಠ ಗುರುಪ್ರಸಾದ್‌, ತಮ್ಮ ನಿಧನಕ್ಕೂ ಮೊದಲು ‘ಎದ್ದೇಳು ಮಂಜುನಾಥ-2’ ಎಂಬ ಹೆಸರಿನ ಸಿನೆಮಾವನ್ನು ತೆರೆಗೆ ತರಲು ಸಿದ್ದತೆ ಮಾಡಿಕೊಳ್ಳುತ್ತಿದ್ದ ವಿಷಯ ಕೆಲವರಿಗೆ ಗೊತ್ತಿರಬಹುದು. ಈಗ ಮಠ ಗುರುಪ್ರಸಾದ್ ಅವರ ಕೊನೆಯ ಸಿನೆಮಾ ‘ಎದ್ದೇಳು ಮಂಜುನಾಥ-2’ ಬಿಡುಗಡೆಗೆ ಸಿದ್ಧವಾಗಿದೆ.

ಹೌದು, 2009ರಲ್ಲಿ ತೆರೆಕಂಡ ‘ಎದ್ದೇಳು ಮಂಜುನಾಥ’ ಸಿನೆಮಾದಲ್ಲಿ ನವರಸ ನಾಯಕ ಜಗ್ಗೇಶ್ ನಾಯಕನಾಗಿ ಅಭಿನಯಿಸಿ ಮೋಡಿ ಮಾಡಿದ್ದರು. ಆ ಸಿನೆಮಾವನ್ನು ಮಠ ಗುರುಪ್ರಸಾದ್‌ ನಿರ್ದೇಶಿಸಿದ್ದರು. ಈಗ ಬರುತ್ತಿರುವ ‘ಎದ್ದೇಳು ಮಂಜುನಾಥ-2’ ಸಿನೆಮಾವನ್ನು ಗುರುಪ್ರಸಾದ್ ಅವರೇ ಕಥೆ ಬರೆದು ನಿರ್ದೇಶನದ ಜೊತೆ ನಾಯಕನಾಗಿಯೂ ನಟಿಸಿದ್ದಾರೆ. ಈಗಾಗಲೇ ‘ಎದ್ದೇಳು ಮಂಜುನಾಥ-2’ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇತ್ತೀಚೆಗೆ ಚಿತ್ರತಂಡ ಮಠ ಗುರುಪ್ರಸಾದ್‌ ಅವರ ಅನುಪಸ್ಥಿತಿಯಲ್ಲಿ ‘ಎದ್ದೇಳು ಮಂಜುನಾಥ-2’ ಚಿತ್ರದ ‘ಕಿತ್ತೋದ ಪ್ರೇಮ…’ ಎಂಬ ಹಾಡನ್ನು ಬಿಡುಗಡೆ ಮಾಡಿತು. ‘ಎದ್ದೇಳು ಮಂಜುನಾಥ-2’ ಚಿತ್ರದ ಈ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಸಿಂಪಲ್ ಸುನಿ, ನಿರ್ಮಾಪಕ ಉದಯ್ ಕೆ. ಮೆಹ್ತಾ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದು ‘ಎದ್ದೇಳು ಮಂಜುನಾಥ್ -2’ ಚಿತ್ರಕ್ಕೆ ಶುಭ ಹಾರೈಸಿದರು.

ಗುರುಪ್ರಸಾದ್‌ ನೆನಪು ಮೆಲುಕು…

ಬಳಿಕ ಹಿರಿಯ ಕಲಾವಿದರಾದ ಶರತ್ ಲೋಹಿತಾಶ್ವ ಮಾತನಾಡಿ, ‘ಗುರುಪ್ರಸಾದ್ ಇದ್ದಿದ್ದರೆ ಈ ಆಡಿಟೋರಿಯಂನಲ್ಲಿ ನಗು, ಅವರ ಓಡಾಟ, ಅಬ್ಬರ ಎಲ್ಲಾ ಇರುತಿತ್ತೇನೋ? ನಾವು ಇಂದು ಅದೆಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನಾನು ಅವರನ್ನು ಅಭಿಮಾನಿಯಾಗಿ ನೋಡಿದ್ದೆ. ಅವರ ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿಲ್ಲ. ನಾನು ಹಿಂದೆ ಹಲವು ಬಾರಿ ಹೇಳಿದ್ದೇನೆ. ನಮ್ಮ ತಂದೆ ‘ಮಠ’, ‘ಎದ್ದೇಳು ಮಂಜುನಾಥ’ ಸಿನೆಮಾವನ್ನು ಟಿವಿಯಲ್ಲಿ ಬಂದಾಗೆಲ್ಲಾ ನಗು, ನಗುತ್ತಾ ಎಂಜಾಯ್ ಮಾಡುತ್ತಿದ್ದರು. ನಾನು ಅಪ್ಪನ ಜೊತೆ ಆ ಚಿತ್ರ ನೋಡಿ ಎಂಜಾಯ್ ಮಾಡಿದ್ದೇನೆ. ಪ್ರತಿಯೊಬ್ಬ ಕಲಾವಿದರಿಗೂ ಒಬ್ಬ ಒಳ್ಳೆ ನಿರ್ದೇಶಕರ ಜೊತೆ ಕೆಲಸ‌ ಮಾಡಬೇಕು ಎಂಬ ಆಸೆ ಇರುತ್ತದೆ. ಆ ಆಸೆ ನನಗೂ ಇತ್ತು. ಆ ಆಸೆ ಗುರುಪ್ರಸಾದ್ ಅವರ ಕೊನೆಯ ಚಿತ್ರದಲ್ಲಿ ಈಡೇರಿದೆ’ ಎಂದರು.

‘ಎದ್ದೇಳು ಮಂಜುನಾಥ-2’ ಚಿತ್ರದಲ್ಲಿ ರಚಿತಾ ಮಹಾಲಕ್ಷ್ಮಿಗೆ ಕೆಲಸ ಮಾಡಿದ ಖುಷಿ

ನಾಯಕಿ ರಚಿತಾ ಮಹಾಲಕ್ಷ್ಮಿ ಮಾತನಾಡಿ, ‘ಇಲ್ಲಿಗೆ ಬಂದಾಗ ಸ್ವಲ್ಪ ಫೀಲಿಂಗ್ ಆಯ್ತು. ‘ರಂಗನಾಯಕ’ ಸಿನೆಮಾ ಸಮಯದಲ್ಲಿ ಗುರುಪ್ರಸಾದ್ ಸರ್, ‘ಬನ್ನಿ ಕುತ್ಕೊಳ್ಳಿ..’ ಅಂತೆಲ್ಲಾ ಆತಿಥ್ಯ ಮಾಡಿದ್ದು ನೆನಪಾಯ್ತು. ಆ ವ್ಯಕ್ತಿಯನ್ನು ಈ ರೀತಿ ನೋಡಿದ್ದು ಬೇಸರವಾಗುತ್ತಿದೆ. ನಾನು ‘ರಂಗನಾಯಕ’ ಸಿನೆಮಾಗೂ ಮೊದಲು ಸೈನ್ ಮಾಡಿದ್ದು ‘ಎದ್ದೇಳು ಮಂಜುನಾಥ-2′ ಸಿನೆಮಾಗೆ. 2020ನಲ್ಲಿ ಈ ಸಿನೆಮಾದ ಚಿತ್ರೀಕರಣ ಮಾಡಿದ್ದು, ಈ ದಾರಿ ಬಹಳ ಸುಲಭವಾಗಿ ಇರಲಿಲ್ಲ. ಗುರುಪ್ರಸಾದ್ ಅವರ ನಿರ್ದೇಶನದಲ್ಲಿ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ’ ಎಂದರು.

ಚಿತ್ರದಿಂದ ಬರುವ ಲಾಭ ಗುರುಪ್ರಸಾದ್‌ ಪುತ್ರಿಯ ಭವಿಷ್ಯಕ್ಕೆ ಮೀಸಲು

‘ಎದ್ದೇಳು ಮಂಜುನಾಥ್-2′ ಚಿತ್ರದ ಹಾಡಿನ ಬಿಡುಗಡೆ ವೇಳೆ ಮಾತನಾಡಿದ ನಿರ್ಮಾಪಕರಾದ ಮೈಸೂರು ರಮೇಶ್, ”ಎದ್ದೇಳು ಮಂಜುನಾಥ-2’ ಸಿನೆಮಾ ನಿರ್ದೇಶಕ ಗುರುಪ್ರಸಾದ್‌ ಅವರ ಕನಸಿನ ಕೂಸು. ಈ ಸಿನೆಮಾದಿಂದ ಬರುವ ಲಾಭದ ಶೇಕಡಾ 50ರಷ್ಟು ಭಾಗವನ್ನು ಗುರುಪ್ರಸಾದ್ ಅವರ ಮಗಳಾದ ನಗು ಶರ್ಮಾ ಅವರ ಭವಿಷ್ಯಕ್ಕೆ ಮೀಸಲಿಡಲಾಗುವುದು’ ಎಂದು ತಿಳಿಸಿದರು. ಇನ್ನು ‘ಎದ್ದೇಳು ಮಂಜುನಾಥ್-2’ ಚಿತ್ರದ ‘ಕಿತ್ತೋದ ಪ್ರೇಮ…’ ಎಂಬ ಹಾಡಿಗೆ ಗುರುಪ್ರಸಾದ್ ಸಾಹಿತ್ಯ ಬರೆದಿದ್ದು, ಗಾಯಕ ನವೀನ್ ಸಜ್ಜು ಈ ಗೀತೆಗೆ ಧ್ವನಿಯಾಗಿದ್ದಾರೆ. ಅನೂಪ್ ಸೀಳಿನ್ ಹಾಡಿಗೆ ಟ್ಯೂನ್ ಹಾಕಿದ್ದಾರೆ. ‘ಎದ್ದೇಳು ಮಂಜುನಾಥ್-2’ ಚಿತ್ರದಲ್ಲಿ ಗುರುಪ್ರಸಾದ್ ಅವರಿಗೆ ಜೋಡಿಯಾಗಿ ರಚಿತಾ ಮಹಾಲಕ್ಷ್ಮಿ ನಟಿಸಿದ್ದು, ಉಳಿದಂತೆ ಶರತ್ ಲೋಹಿತಾಶ್ವ, ಚೈತ್ರಾ ಆಚಾರ್, ವಿಘ್ನೇಶ್ ಕಟ್ಟಿ, ರವಿ ದೀಕ್ಷಿತ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಫೆ. 21ಕ್ಕೆ ‘ಎದ್ದೇಳು ಮಂಜುನಾಥ್-2’ ತೆರೆಗೆ

‘ಎದ್ದೇಳು ಮಂಜುನಾಥ-2’ ಸಿನಿಮಾಗೆ ಮೈಸೂರು ರಮೇಶ್ ಬಂಡವಾಳ ಹೂಡಿದ್ದು, ರವಿ ದೀಕ್ಷಿತ್ ಕೋ ಪ್ರೊಡ್ಯೂಸರ್ ಆಗಿ ಸಾಥ್ ಕೊಟ್ಟಿದ್ದಾರೆ. ‘ರಾಮ್ ಮೂವೀಸ್’, ‘ಗುರುಪ್ರಸಾದ್ ಇಂಕ್‌’ ಹಾಗೂ ‘ಫ್ರೆಂಡ್ಸ್ ಫೋರಂ’ ಬ್ಯಾನರ್ ನಡಿ ಜಂಟಿಯಾಗಿ ‘ಎದ್ದೇಳು ಮಂಜುನಾಥ್-2’ ಚಿತ್ರ ಮೂಡಿಬಂದಿದೆ. ಈ ಚಿತ್ರಕ್ಕೆ ಅಶೋಕ ಸಾಮ್ರಾಟ್ ಕ್ಯಾಮೆರಾ ಹಿಡಿದಿದ್ದು, ಲಿಂಗರಾಜು ಹಾಗೂ ಉದಯ್ ಸಂಕಲನ ಜವಾಬ್ದಾರಿ ನಿಭಾಯಿಸಿದ್ದು, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಇದೇ ಫೆಬ್ರವರಿ 21ಕ್ಕೆ ‘ಎದ್ದೇಳು ಮಂಜುನಾಥ್-2’ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

Related Posts

error: Content is protected !!