ತುಳುಚಿತ್ರ ‘ದಸ್ಕತ್’ ಕನ್ನಡದಲ್ಲಿ ಬಿಡುಗಡೆಗೆ ಸಿದ್ದ

ಕರಾವಳಿ ಪ್ರತಿಭೆಗಳ ‘ದಸ್ಕತ್’ ಚಿತ್ರ ಕನ್ನಡದಲ್ಲಿ ಬಿಡುಗಡೆ
70 ದಿನಗಳ ಯಶಸ್ವಿ ಪ್ರದರ್ಶನ ಕಂಡ ತುಳುಚಿತ್ರ ‘ದಸ್ಕತ್’ ಚಿತ್ರ ಕನ್ನಡದಲ್ಲಿ ತೆರೆಗೆ ಸಿದ್ದ
‘ದಸ್ಕತ್’ ಚಿತ್ರದ ಕನ್ನಡದ ಟ್ರೈಲರ್ ಬಿಡುಗಡೆ
ಸ್ಯಾಂಡಲ್ವುಡ್ ನಲ್ಲಿ ಕರಾವಳಿ ಭಾಗದ ಪ್ರತಿಭೆಗಳ ಅಬ್ಬರ ಜೋರಾಗಿ ನಡೆಯುತ್ತಿದೆ. ಎಲ್ಲಾ ಕಾಲಘಟ್ಟಕ್ಕೂ ಒಪ್ಪುವಂತಹ ಕಥಾನಕ ಬಂದರೆ ಖಂಡಿತ ಪ್ರೇಕ್ಷಕರ ಗಮನ ಸೆಳೆಯಬಹುದು ಎಂಬ ನಿಟ್ಟಿನಲ್ಲಿ ಪ್ರೇಕ್ಷಕರ ಮುಂದೆ ಬಂದಂತಹ ತುಳುವಿನ ಚಿತ್ರ ‘ದಸ್ಕತ್’. ಈಗ ಈ ಚಿತ್ರವನ್ನು ಕನ್ನಡದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡು ಮೇ. 9ರಂದು ರಾಜ್ಯಾದ್ಯಂತ ತೆರೆಯ ಮೇಲೆ ತರಲು ಪ್ಲಾನ್ ಮಾಡಿಕೊಂಡಿದೆ. ಈ ವಿಚಾರವಾಗಿ ಚಿತ್ರತಂಡ ಕನ್ನಡದ ಟ್ರೈಲರ್ ಬಿಡುಗಡೆ ಮಾಡುವ ಮೂಲಕ ಪತ್ರಿಕಾಗೋಷ್ಠಿಯನ್ನು ಆಯೋಜನೆ ಮಾಡಿತ್ತು.
ಮೇ. 9ರಂದು ‘ದಸ್ಕತ್’ ಕನ್ನಡದಲ್ಲಿ ಬಿಡುಗಡೆ
ಈ ಚಿತ್ರದ ಕುರಿತು ನಿರ್ದೇಶಕ ಅನೀಶ್ ಪೂಜಾರಿ ವೇಣೂರು ಮಾತನಾಡುತ್ತಾ, ‘ನಾನು 2015 ರ ಝೀ ಕಾಮಿಡಿ ರಿಯಾಲಿಟಿ ಶೋ ನಲ್ಲಿ ಬಂದಂತಹ ಪ್ರತಿಭೆ. ನನ್ನದೇ ಒಂದಷ್ಟು ಗೆಳೆಯರ ಬಳಗ ಸೇರಿಕೊಂಡು ಕಿರುಚಿತ್ರ ಹಾಗೂ ವೆಬ್ ಸೀರೀಸ್ ಆನ್ನ ಮಾಡಿದ್ವಿ. ತದನಂತರ ಚಿತ್ರ ಮಾಡಬೇಕೆಂಬ ಉದ್ದೇಶದಿಂದ ಬಹಳಷ್ಟು ಪೂರ್ವ ತಯಾರಿಯನ್ನು ಮಾಡಿಕೊಂಡು ಈ ‘ದಸ್ಕತ್’ ಎಂಬ ಶೀರ್ಷಿಕೆ ಇಟ್ಟುಕೊಂಡು ಚಿತ್ರ ಶುರು ಮಾಡಿದ್ವಿ, ‘ದಸ್ಕತ್’ ಅಂದರೆ (ಸಿಗ್ನೇಚರ್) ಸಹಿ ಮಾಡುವುದು ಎಂಬ ಅರ್ಥ. ಒಂದು ಹಳ್ಳಿಯಲ್ಲಿ ಜನ ಸಹಿಗಾಗಿ ಎಷ್ಟು ಕಷ್ಟ ಪಡ್ತಾರೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. ಒಂದು ಸಹಿಯಿಂದ ಏನೆಲ್ಲಾ ಅವಾಂತರ ಸೃಷ್ಟಿಯಾಗುತ್ತದೆ. ಶ್ರೀಮಂತರು, ಬಡವರು ಹಾಗೂ ಅಧಿಕಾರಿಗಳ ನಡುವಿನ ತಳಮಳದ ಜೊತೆಗೆ ಬದುಕು ಹೇಗೆಲ್ಲಾ ಸಾಗುತ್ತದೆ ಎಂಬುದನ್ನು ಬಹಳ ಸೂಕ್ಷ್ಮವಾಗಿ ಹೇಳುವ ಪ್ರಯತ್ನ ಮಾಡಿದ್ದೇವೆ. ಇಂತಹ ಘಟನೆಗಳು ಪ್ರತಿಯೊಬ್ಬರ ಬದುಕಿನಲ್ಲಿ ನಡೆಯುವಂತಹ ಸಾಧ್ಯತೆ ಇದ್ದೇ ಇರುತ್ತದೆ. ಕರಾವಳಿ ಭಾಗದ ಸುತ್ತ ಚಿತ್ರೀಕರಿಸಿರುವ ನಮ್ಮ ಈ ತುಳು ಚಿತ್ರ ‘ದಸ್ಕತ್’ ಬಿಡುಗಡೆಗೊಂಡು ಯಶಸ್ವಿ 70 ದಿನವನ್ನು ಪೂರೈಸಿದೆ. ಹಾಗೆಯೇ ಕೆನಡಾ, ನೈಜೀರಿಯಾ, ದುಬೈ, ಸೇರದಂತೆ ದೇಶದ ನಾನಾ ಭಾಗಗಳನ್ನು ಕೂಡ ನಮ್ಮ ಚಿತ್ರ ಪ್ರದರ್ಶನ ಆಗಿದ್ದು ಇನ್ನು ಹಲವು ದೇಶಗಳಲ್ಲಿ ಪ್ರದರ್ಶನವಾಗಬೇಕಿದೆ’ ಎಂದರು.
ಸಿನೆಮಾ ನೋಡಿ ಮೆಚ್ಚಿಕೊಂಡ ತಾರೆಯರು…
ನಮ್ಮ ಚಿತ್ರದ ಟ್ರೈಲರ್ ವೀಕ್ಷಿಸಿದಂತ ಹಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನಟ ಶ್ರೀ ಮುರಳಿ, ನಟ ರಾಜ್ ಬಿ. ಶೆಟ್ಟಿ ಸೇರಿದಂತೆ ಹಲವಾರು ಸಿನೆಮಾ ಕಲಾವಿದರು ತಂತ್ರಜ್ಞರು ನೋಡಿ ಮೆಚ್ಚಿಕೊಂಡಿದ್ದಾರೆ. ನಮ್ಮ ಚಿತ್ರವನ್ನು ವೀಕ್ಷಿಸಿದಂತಹ ಚಿತ್ರ ಪ್ರೇಮಿಗಳು, ತಾರೆಯರು, ತಂತ್ರಜ್ಞರು ಕೂಡ ಮೆಚ್ಚಿಕೊಂಡರು. ವಿಶೇಷವಾಗಿ ಈ ಬಾರಿಯ ‘ಬೆಂಗಳೂರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ’ದಲ್ಲಿ ನಮ್ಮ ಚಿತ್ರ ಪ್ರದರ್ಶನಗೊಂಡು ಎಲ್ಲರಿಂದ ಪ್ರಶಂಸೆ ಪಡೆದು ಮೂರನೇ ‘ಅತ್ಯುತ್ತಮ ಚಿತ್ರ’ವಾಗಿ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದೆ. ಇದೆಲ್ಲವೂ ನಮಗೆ ಬಹಳ ಸಂತೋಷವನ್ನು ತಂದಿದ್ದು. ನಮ್ಮ ಈ ಚಿತ್ರವನ್ನು ಎಲ್ಲರೂ ನೋಡುವಂತಾಗಬೇಕು ಹಾಗಾಗಿ ರಾಜ್ಯಾದ್ಯಂತ ಬಿಡುಗಡೆ ಮಾಡಬೇಕೆಂದು ನಿರ್ಧರಿಸಿ ಈ ಚಿತ್ರವನ್ನು ಮೇ. 9ರಂದು ಬಿಡುಗಡೆ ಮಾಡಲು ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ. ನಿಮ್ಮೆಲ್ಲರ ಪ್ರೀತಿ ಸಹಕಾರ ಇರಲಿ’ ಎಂದು ಕೇಳಿಕೊಂಡರು.
ಕನ್ನಡದಲ್ಲಿ ಡಬ್ ಮಾಡಿ ಬಿಡುಗಡೆ
ಇನ್ನು ಈ ಚಿತ್ರವನ್ನ ಕನ್ನಡದಲ್ಲಿ ಡಬ್ ಮಾಡಿ ಬಿಡುಗಡೆ ಮಾಡುತ್ತಿರುವಂತಹ ನಿರ್ಮಾಪಕ ಜಗದೀಶ್ ಎನ್. ಅರೇಬನ್ನಿಮಂಗಲ ಮಾತನಾಡುತ್ತ, ‘ನಾನು ಒಬ್ಬ ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿ ಗ್ರಾಮದ ಕಷ್ಟ ಸುಖಗಳನ್ನ ಚೆನ್ನಾಗಿ ತಿಳಿದುಕೊಂಡು ಪರಿಹಾರ ಕೂಡ ಮಾಡಿದ್ದೇನೆ. ನಮ್ಮ ಹುಡುಗನ ಮೂಲಕ ಈ ಚಿತ್ರದ ಟೀಸರ್ ನೋಡಿದೆ. ನಿರ್ದೇಶಕರನ್ನು ಕರೆಸಿ, ಇಡೀ ಚಿತ್ರವನ್ನು ನೋಡಿದೆ. ನನಗೆ ತುಳು ಬರದಿದ್ದರೂ ಅದರ ಭಾವನೆಗಳ ತುಂಬಾ ಇಷ್ಟವಾಯಿತು. ಗ್ರಾ. ಪಂ. ಅಧಿಕಾರಿಯಿಂದ ಆ ಹಳ್ಳಿಯ ಮುಗ್ಧ ಜನ ಹೇಗೆಲ್ಕಾ ಕಷ್ಟಪಡುತ್ತಿದ್ದಾರೆ ಎಂಬುವುದನ್ನು ಬಹಳ ಸೊಗಸಾಗಿ ತೋರಿಸಿದ್ದಾರೆ. ಹಾಗಾಗಿ ಈ ಚಿತ್ರವನ್ನು ಕನ್ನಡದಲ್ಲಿ ಬಿಡುಗಡೆ ಮಾಡಲು ಪ್ಲಾನ್ ಮಾಡಿ ಹೊರ ತರುತ್ತಿದ್ದೇವೆ. ನಿಮ್ಮೆಲ್ಲರ ಸಹಕಾರ ಇರಲಿ’ ಎಂದರು.
ನಮ್ಮ ಈ ಚಿತ್ರವನ್ನು ನೋಡಿ ಬೆಂಬಲಿಸಿ…
ಈ ಚಿತ್ರದ ನಾಯಕನ ಪಾತ್ರಧಾರಿ ದೀಕ್ಷಿತ ಮಾತನಾಡುತ್ತ, ‘ಇದು ನನ್ನ ಮೊದಲ ಕನ್ನಡ ಚಿತ್ರ. ಈಗಾಗಲೇ ನಾನು ತುಳು ಭಾಷೆಯಲ್ಲಿ ಮೂರು ಚಿತ್ರವನ್ನು ಮಾಡಿದ್ದೇನೆ. ನನ್ನದು ಶೇಖರ್ ಎಂಬ ಪಾತ್ರ, ಜನರು ನನ್ನ ಪಾತ್ರವನ್ನು ನೋಡಿ ಇಷ್ಟಪಟ್ಟಿದ್ದಾರೆ. ನಮ್ಮ ಈ ಕನ್ನಡ ಚಿತ್ರವನ್ನು ನೋಡಿ ಬೆಂಬಲಿಸಿ’ ಎಂದರು.
ಇನ್ನು ನಾಯಕಿಯಾಗಿ ಅಭಿನಯಿಸಿರುವ ಭವ್ಯ ಪೂಜಾರಿ ಮಾತನಾಡುತ್ತಾ, ‘ನಾನು ಈಗಾಗಲೇ ಸೀರಿಯಲ್ ಹಾಗೂ ಸಿನಿಮಾ ಸೇರಿದಂತೆ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿದ್ದೇನೆ. ಇದೊಂದು ಹಳ್ಳಿ ಹುಡುಗಿಯ ಪಾತ್ರ. ನಿಮ್ಮೆಲ್ಲರ ಪ್ರೀತಿ ಸಹಕಾರ ನಮ್ಮ ಚಿತ್ರದ ಮೇಲೆ ಇರಲಿ’ ಎಂದರು. ಈ ಚಿತ್ರದ ಸಂಗೀತ ನಿರ್ದೇಶಕ ಸಮರ್ಥನ್. ಎಸ್. ರಾವ್ ಮಾತನಾಡುತ್ತಾ, ‘ಈ ಚಿತ್ರದಲ್ಲಿ ಮೂರು ಸಾಂಗ್ ಹಾಗೂ ಮೂರು ಬಿಟ್ಸ್ ಗಳು ಇದ್ದು, ನಮ್ಮ ತಂಡ ಬಹಳ ಶ್ರಮಪಟ್ಟು ಕೆಲಸ ಮಾಡಿದೆ. ಹಾಡುಗಳು ಬಹಳ ಸೊಗಸಾಗಿ ಮೂಡಿ ಬಂದಿದೆ’ ಎಂದರು.
ಈಗಾಗಲೇ ತುಳು ಭಾಷೆಯಲ್ಲಿ ನಿರ್ಮಾಣವಾಗಿ, ತುಳು ನಾಡಿನೆಲ್ಲೆಡೆ ಯಶಸ್ವಿ ಪ್ರದರ್ಶನ ಕಂಡು ಸೂಪರ್ ಹಿಟ್ ಆದ ಈ ‘ದಸ್ಕತ್’ ಚಿತ್ರವನ್ನು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅರ್ಪಿಸುವ ‘ಸೆವೆಂಟಿ ಸೆವೆನ್ ಸ್ಟುಡಿಯೋಸ್’ ಅಡಿ ರಾಘವೇಂದ್ರ ಕುಡ್ವ ನಿರ್ಮಾಣ ಮಾಡಿದು, ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಅನೀಶ್ ಪೂಜಾರಿ ವೇಣೂರು ಕಥೆ, ಚಿತ್ರಕಥೆ ಬರೆದು ಆಕ್ಷನ್-ಕಟ್ ಹೇಳಿದ್ದಾರೆ. ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಪ್ರಜ್ಞೇಶ್ ಶೆಟ್ಟಿ ಕಾರ್ಯ ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಟ ಮೋಹನ್ ಶೇಣಿ, ಭವ್ಯ ಪೂಜಾರಿ, ಹಾಸ್ಯ ನಟ ದೀಪಕ್ ರೈ ಪಾಣಾಜೆ ಸೇರಿದಂತೆ ಹಲವರು ನಟಿಸಿದ್ದಾರೆ. ಈ ಚಿತ್ರಕ್ಕೆ ಸಂತೋಷ್ ಆಚಾರ್ಯ ಗುಂಪಲಾಜೆ ಛಾಯಾಗ್ರಹಣ ಹಾಗೂ ಗಣೇಶ್ ನೀರ್ಚಾಲ್ ಸಂಕಲನವಿದೆ. ಈ ‘ದಸ್ಕತ್’ ಚಲನಚಿತ್ರ ಇದೀಗ ಕನ್ನಡದಲ್ಲೂ ಸಹ ಮೂಡಿಬರುತ್ತಿದ್ದು ಮೇ. 9 ರಂದು ರಾಜ್ಯಾದ್ಯಂತ ಬೆಳ್ಳಿತೆರೆಗೆ ಬರಲು ಸಿದ್ಧವಾಗಿದೆ.